ಕಾರವಾರ: ಭಾರತೀಯ ನೌಕಾಪಡೆ ದಿನಾಚರಣೆ ನಿಮಿತ್ತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ತಾಲೂಕಿನ ಅರ್ಗಾದ ನೌಕಾನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನೆರವೇರಿದವು.
ಅರ್ಗಾದ ಐಎನ್ಎಸ್ ಕದಂಬ ನೌಕಾನೆಲೆಗೆ ಸಂಜೆ ಆಗಮಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರು ಬರಮಾಡಿಕೊಂಡರು.
ಬಳಿಕ ರಾಜ್ಯಪಾಲರಿಗೆ ಐಎನ್ಎಸ್ ಕದಂಬ ಪರೇಡ್ ಮೈದಾನದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ರಾಜ್ಯಪಾಲರ ಸಮ್ಮುಖದಲ್ಲಿ ನೌಕಾ ಬ್ಯಾಂಡ್ನಿಂದ ‘ಅಟ್ ಹೋಮ್’ ಕಾರ್ಯಕ್ರಮ ಮತ್ತು ‘ಬೀಟಿಂಗ್ ರಿಟ್ರೀಟ್’ ಸಮಾರಂಭವನ್ನು ಇಲ್ಲಿನ ನೇವಿ ಹೌಸ್ನಲ್ಲಿ ನಡೆಸಲಾಯಿತು.
ಸೂರ್ಯಾಸ್ತದ ಸಂದರ್ಭದಲ್ಲಿ ನೌಕಾ ಧ್ವಜವನ್ನು ಕೆಳಕ್ಕೆ ಎಳೆಯುವುದರ ಮೂಲಕ ಸಮಾರಂಭವು ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ನೌಕಾ ಬಂದರಿನಲ್ಲಿ ಲಂಗರು ಹಾಕಿರುವ ನೌಕಾ ಯುದ್ಧನೌಕೆಗಳು ವಿದ್ಯುದಲಂಕಾರಗಳೊಂದಿಗೆ ಝಗಮಗಿಸಿದವು.
ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ನೌಕಾ ಯೋಧರು, ನೌಕಾ ಅಧಿಕಾರಿಗಳು ಮತ್ತು ನಾವಿಕರು ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.