ಭಟ್ಕಳ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟೂ 4483 ಮನೆಗಳಿಗೆ ನೀರು ನುಗ್ಗಿದ್ದು ಅಪಾರ ಹಾನಿ ಸಂಭವಿಸಿದೆ ಎಂದು ನೆರೆಹಾವಳಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾಹಿತಿ ನೀಡದರು.
ಭಟ್ಕಳದ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 21 ಮನೆಗಳು ಪೂರ್ಣ ಹಾನಿಯಾಗಿವೆ. 32 ಮನೆಗಳಿಗೆ ತೀವ್ರ ಹಾನಿಯಾಗಿದೆ. 88 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜಾನುವಾರು ಹಾನಿಯಾಗಿದೆ ಎಂದೂ ತಿಳಿಸಲಾಯಿತು.
ಗ್ರಾಮಾಂತರ ಭಾಗದಲ್ಲಿ 16 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 9 ಪಂಚಾಯತ್ ವ್ಯಾಪ್ತಿಯಲ್ಲಿ 126 ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು ಒಟ್ಟೂ 95,27,000 ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
3395 ಮನೆಗಳಿಗೆ ನೀರು ನುಗ್ಗಿದ್ದು ತಲಾ 10 ಸಾವಿರ ರೂ. ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. 6 ಮನೆಗಳು ಪೂರ್ಣ ಹಾನಿಯಾಗಿವೆ, 26 ಭಾಗಶಃ ಹಾನಿಯಾಗಿವೆ ಎಂದು ತಿಳಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದೇವಸ್ಥಾನಗಳಿಗೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿರುವುದಕ್ಕೆ ಪ್ರತ್ಯೇಕವಾಗಿ ಅಂದಾಜು ತಯಾರಿಸಿ ಸರಕಾರಕ್ಕೆ ಕಳುಹಿಸಬೇಕು. ವಿಶೇಷ ಪ್ರಕರಣ ಎಂದು ಮಂಜೂರಿ ಮಾಡಲು ಮುಖ್ಯ ಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.
ಮಳೆಯಿಂದ ಒಮ್ಮೆ ನೀರು ನುಗ್ಗಿದರೆ ಮಣ್ಣುಗೋಡೆಯ ಹಾಗೂ ಕಚ್ಚಾ ಮನೆಗಳು ಯಾವ ಸಮಯದಲ್ಲಿ ಬೀಳುತ್ತವೆ ಎಂದು ಹೇಳಲಾಗದು. ನೀರು ನಿಂತು ಹತ್ತು ಹದಿನೈದು ದಿನದ ನಂತರವೂ ಬೀಳುವ ಸಾಧ್ಯತೆ ಇದೆ. ಕಾರಣ ಪರಿಹಾರದ ಅರ್ಜಿಗಳನ್ನು ತೆಗೆದುಕೊಳ್ಳುವುದನ್ನು ನಿರಂತರವಾಗಿ ಮುಂದುವರಿಸಿ ಯಾರೇ ಬಂದರೂ ಕೂಡಾ ಇಲ್ಲ ಎಂದು ಹೇಳುವಂತಿಲ್ಲಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ ಹಾಗೂ ಇನ್ನಿತರರು ಇದ್ದರು.