ಕಾರವಾರ: ನೆರೆ ಹಾವಳಿಯಿಂದ ಕಳೆದುಕೊಂಡವರಿಗೆ ತುರ್ತಾಗಿ 10 ಸಾವಿರ ರೂ. ಪರಿಹಾರವನ್ನು ನೀಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಅಂಕೋಲಾದಲ್ಲಿ ನೆರೆ ಹಾವಳಿಯಿಂದ ಹಾನಿಗೊಂಡ ಪ್ರದೇಶವನ್ನು ವಿಕ್ಷಣೆ ಮಾಡಿದ ಬಳಿಕ ಅಂಕೋಲಾ ತಾಲೂಕಿನ ನಾಡವರ ಸಭಾಭವನದಲ್ಲಿ ಪ್ರಕೃತಿ ವಿಕೋಪದಡಿ ಪರಿಹಾರ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಸಂಗ್ರಹಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ನೆರೆ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಮನೆ ಹಾನಿಗೆ ಸಂಬಂಧಿಸಿದಂತೆ ಸಂತ್ರಸ್ಥರಿಗೆ ಈಗಾಗಲೇ 3800 ರೂ. ನೀಡಲಾಗಿದೆ. ಹೊಸ ಆದೇಶದಂತೆ ತಕ್ಷಣ 10 ಸಾವಿರ ನೀಡಬೇಕು ಎಂದು ಸೂಚಿಸಲಾಗಿದೆ. ಉಳಿದ 6200 ರೂ. ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ , ಭಾಗಶಃ 3 ಲಕ್ಷ, ಸ್ವಲ್ಪ ಹಾನಿಯಾಗಿದ್ದರೆ 50 ಸಾವಿರ ನೀಡುವಂತೆ ಆದೇಶ ಮಾಡಲಾಗಿದೆ. ಅದರಂತೆ ಕಳಚೆ ಗ್ರಾಮ ಸಂಪೂರ್ಣ ಸ್ಥಳಾಂತರಕ್ಕೆ ಯೋಜನೆ ರೂಪಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದು ಅಗತ್ಯವಾದ 15 ಎಕರೆ ಜಾಗ ಹುಡುಕಿ ಎಂದು ಜಿಲ್ಲಾಧಿಕಾರಿಗೆ ಆದೇಶಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಒಟ್ಟೂ 619 ಕಿ.ಮಿ. ಗ್ರಾಮೀಣ ರಸ್ತೆ ಹಾನಿಯಾಗಿದ್ದರಿಂದ ಜನರು ತೀವ್ರ ತೊಂದರೆಯಲ್ಲಿದ್ದಾರೆ. ಈ ರಸ್ತೆಗಳ ದುರಸ್ತಿಗೆ ತುರ್ತಾಗಿ 200 ಕೋಟಿ ರೂ. ಬಿಡುಗಡೆ ಮಾಡುತ್ತೇನೆ. ಉಳಿದ ರಸ್ತೆ ದುರಸ್ತಿಗಾಗಿ ಹಣ ಬೇಕಾಗಿದ್ದು ಸಮೀಕ್ಷೆ ಸೂಕ್ತ ರೀತಿಯಲ್ಲಿ ಮಾಡಿದ ಬಳಿಕ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಹಣಕಾಸು ಇಲಾಖೆಯ ಜೊತೆಗೆ ಚರ್ಚೆ ಮಾಡಿ ಹಣ ಬಿಡುಗಡೆ ಮಾಡಿಸಲಾಗುವುದು ತಕ್ಷಣ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.
ಅರಣ್ಯ ಕಾಯಿದೆ ಪ್ರಕಾರ ಮನೆ ನಿರ್ಮಾಣ ಮಾಡಿಕೊಂಡವರಿಗೆ ನೆರೆ ಹಾವಳಿಯಿಂದ ಹಾನಿಗೊಂಡ ಮನೆಗಳಿಗೆ ಕಳೆದ ವರ್ಷವೂ ಹಣ ನೀಡಲಾಗಿದೆ. ಅದೇ ಮಾದರಿಯಲ್ಲಿ ಈ ವರ್ಷವೂ ಹಣ ಬಿಡುಗಡೆ ಮಾಡಿ ಪರಿಹಾರ ನೀಡಿ ಎಂದು ಸೂಚಿಸಿದ ಅವರು, ಜಿಲ್ಲೆಯಲ್ಲಿ ವಿದ್ಯುತ್ ಲೈನ್ ಗಳ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಅವರು ಜಿಲ್ಲೆಯಲ್ಲಿ ಈಗಾಗಲೇ ಹೆಸ್ಕಾಂಗೆ 4.50 ಕೋಟಿ ರೂ. ಹಾನಿಯಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಅದರಂತೆ ಎಡಿಆರ್ಎಫ್ ನಿಂದ ಹಣ ಬಿಡುಗಡೆ ಮಾಡಲಾಗುವುದು ಶೀಘ್ರವೇ ದುರಸ್ತೆ ಕಾರ್ಯ ಆರಂಭಿಸುವಂತೆ ಅಧಿಖಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾನಿಗೆ ಸಂಬಂಧಿಸಿದಂತೆ ಅಗತ್ಯವಿದೆ ಇರುವ ಹಣ ನೀಡಲಾಗುವುದು ಹೆಚ್ಚುವರಿಯಾಗಿ ಬೇಕಾದ ಹಣದ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು.