ಕುಮಟಾ: ಬುಧವಾರ ರಾತ್ರಿ ಕುಮಟಾದಲ್ಲಿ ಪತ್ತೆಯಾದ ಬಾಂಬ್ ಮಾದರಿಯ ವಸ್ತು ನಕಲಿ ಬಾಂಬ್ ಎಂದು ತಿಳಿದು ಬಂದಿದ್ದು ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಎರಡು ಬದಿಯಲ್ಲಿ ಪೈಪ್ ಮಧ್ಯದಲ್ಲಿ ಸರ್ಕೀಟ್ ಬೋರ್ಡ್, ಬ್ಯಾಟರಿ, ತಂತಿಗಳನ್ನು ಒಳಗೊಂಡಿರುವ ವಸ್ತುವನ್ನು ನಿಜವಾದ ಬಾಂಬ್ ಮಾದರಿಯಲ್ಲೇ ತಯಾರಿಸಿರುವುದರಿಂದ ಸ್ಥಳದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು ಅವರು ಸ್ಥಳಕ್ಕೆ ಧಾವಿಸಿ ಮಂಗಳೂರಿನ ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಿದ್ದರು.
ಮಂಗಳೂರಿನಿಂದ ಅತ್ಯಂತ ವೇಗದಲ್ಲಿ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ವಸ್ತುವಿನ ಪರಿಶೀಲನೆ ನಡೆಸಿ ನಕಲಿ ಎಂದು ಮಾಹಿತಿ ನೀಡಿದ್ದಾರೆ. ತೀವ್ರ ತನಿಖೆ ಸಾಧ್ಯತೆ ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳುವಂತೆ ಮಾಡಿದ ಈ ಘಟನೆಯ ಹಿಂದೆ ಯಾರ ಕೈವಾಡ ಇದೆ ಎನ್ನುವ ಕುರಿತು ಪೊಲೀಸ್ ಇಲಾಖೆಯಿಂದ ತೀವ್ರ ತನಿಖೆ ನಡೆಯುವ ಸಾಧ್ಯತೆ ಇದ್ದು ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು ಅವರು ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.
ಬುಧವಾರ ರಾತ್ರಿ ಕುಮಟಾ ವಿದ್ಯಾಧೀರಾಜ ಪಾಲಿಟೆಕ್ನಿಕ್ ಕಾಲೇಜಿನ ಹಿಂಬಾಗದಲ್ಲಿ ವಾಯು ವಿಹಾರಕ್ಕೆ ಆಗಮಿಸಿದ ಕೆಲವರಿಗೆ ಈ ವಸ್ತು ಕಂಡು ಬಂದಿದ್ದು ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಕೂಡಲೇ ಪೊಲೀಸರು, ಅಗ್ನಿ ಶಾಮಕ ದಳದವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು .ಆದರೂ ಬಾಂಬ್ ಮಾದರಿ ವಸ್ತು ಅಸಲಿಯೋ ನಕಲಿಯೋ ಎಂಬ ಸಂಶಯಕ್ಕೆ ಕಾರಣವಾಗಿತ್ತು.
ಇದನ್ನು ತಯಾರಿಸಿ ಇಟ್ಟ ಉದ್ದೇಶವೇನು? ಇದರಲ್ಲಿ ಯಾರಾದರೂ ವಿದ್ಯಾರ್ಥಿಗಳ ಪಾತ್ರ ಇದೆಯಾ? ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಅರಣ್ಯ ಪ್ರದೇಶದಂತೆ ಕಂಡು ಬರುವ ಕಾಲೇಜು ಹಿಂಬದಿ ಪ್ರದೇಶದಲ್ಲಿ ಕಾನೂನು ಬಾಹಿರ ಕೆಲಸಗಳು, ಅನೈತಿಕ ಚಟುವಟಿಕೆಗಳು ನಡೆಯುವ ಕುರಿತು ಮಾತುಗಳು ಕೇಳಿ ಬರುತ್ತಿದ್ದು ವಾಯು ವಿಹಾರಕ್ಕೆ ಬರುವವರಿಗೆ ಹೆದರಿಸುವ ಉದ್ದೇಶ ಈ ನಕಲಿ ಬಾಂಬ್ ಹಿಂದೆ ಇದೆಯೇ? ಎನ್ನುವುದು ತಿಳಿದು ಬರಬೇಕಿದೆ.