ಕಾರವಾರ: ಉಕ್ರೇನ್ ನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಕರೆತರುವ ಕೆಲಸವನ್ನು ಭಾರತ ಸರ್ಕಾರ ಮಾಡಲಿದೆ ಎಂದು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾರವಾರದಲ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರಂಭಿಕ ಹಂತದಲ್ಲಿ ಆಗಿರುವ ಆತಂಕದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅನೇಕರನ್ನು ಸರ್ಕಾರ ಭಾರತಕ್ಕೆ ಕರೆತರುವ ಪ್ರಯತ್ನ ಮಾಡಿದೆ. ಈ ಮಧ್ಯೆ ಇನ್ನೂ ಕೆಲವರು ಅಲ್ಲಿಯೇ ಸಿಲುಕಿದ್ದಾರೆಂಬ ಮಾಹಿತಿ ದೊರೆತಿದೆ. ಈ ಪೈಕಿ ಉತ್ತರಕನ್ನಡ ಜಿಲ್ಲೆಯವರೂ ಇರುವುದು ತಿಳಿದುಬಂದಿದೆ. ಎಲ್ಲಾ ರಾಜ್ಯಗಳ ಪ್ರತಿ ಜಿಲ್ಲೆಯ ಜನರ ವಿವರ ಕಲೆ ಹಾಕಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಕೊನೆಯ ವ್ಯಕ್ತಿಯನ್ನೂ ಸುರಕ್ಷಿತವಾಗಿ ಕರೆತರುವ ಕೆಲಸವನ್ನ ಭಾರತ ಸರ್ಕಾರ ಮಾಡಲಿದೆ ಎಂದು ಅವರು ಭರವಸೆ ನೀಡಿದರು.
ನಮ್ಮ ವ್ಯವಸ್ಥೆಯ ದುರಂತ :
ಯಾವ ಸಂಘಟನೆಗಳನ್ನು ಬ್ಯಾನ್ ಮಾಡಬಹುದು ಎಂಬ ಬಗ್ಗೆ ಅದರದ್ದೇ ಆದ ಮಾನದಂಡಗಳಿವೆ. ಆರೋಪ ಕೇಳಿಬಂದಿರುವ ಸಂಘಟನೆಗಳನ್ನ ಏನು ಮಾಡಬೇಕೆಂದು ಸರಕಾರ ಯೋಚನೆ ಮಾಡುತ್ತಿದೆ. ಹರ್ಷನನ್ನು ಕಳೆದುಕೊಂಡಿರುವಂಥದ್ದು ನಮ್ಮ ವ್ಯವಸ್ಥೆಯ ದುರಂತ. ಹರ್ಷಾ ಕೊಲೆ ಪ್ರಕರಣದ ನಂತರ ಎಸ್.ಡಿಪಿಐ, ಪಿಎಫ್ಐ, ಸಿಎಫ್ಐ ಬ್ಯಾನ್ ಗೆ ಸಂಬಂಧಿಸಿದ ಒತ್ತಾಯ ಕೇಳಿಬಂದಿರುವುದಕ್ಕೆ ಸರಕಾರ ಹಾಗೂ ಸಂಘಟನೆಗಳು ಹರ್ಷಾನ ಮನೆಗೆ ಭೇಟಿ ನೀಡಿವೆ.ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕಾದ ಎಲ್ಲಾ ಜವಾಬ್ದಾರಿ ನಮ್ಮ ಮೇಲಿದೆ. ದಿಢೀರ್ ಆಗಿ ಕೆಲವು ಮತಾಂಧ ಶಕ್ತಿಗಳು ನಡೆಸಿದ ಕೃತ್ಯಗಳಿವು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧನ ಮಾಡಲಾಗಿದೆ. ಸಹಜವಾಗಿ ಎಲ್ಲೆಲ್ಲಿ ಅಹಿತಕರ ಘಟನೆ ನಡೆಯಬಹುದು ಎಂದು ಇಂಟೆಲಿಜೆನ್ಸ್ನವರು ಮಾಹಿತಿ ಪಡೆದುಕೊಂಡಿರುತ್ತಾರೆ ಎಂದರು.
ಹಿಂದುತ್ವದ ಪರವಾಗಿ ಹರ್ಷನ ವಾದ, ಚರ್ಚೆ ಸಹಜವಾಗಿರುವುದು. ಕೊಲ್ಲುವಷ್ಟು ಕ್ರೂರತ್ವ ಮನುಷ್ಯರಿಗೆ ಬರೋದು ಯಾವುದೇ ಸರಕಾರಕ್ಕೆ ಅರ್ಥವಾಗೋದು ಕಷ್ಟ. ಮತಾಂಧತೆ, ಕ್ರೂರತ್ವ ಮೆರೆದವರಿಗೆ ಕಠಿಣ ಶಿಕ್ಷೆಯೇ ಪರಿಹಾರ. ಹರ್ಷನ ಕೊಲೆಯಲ್ಲಿ ಯಾರ್ಯಾರಿದ್ದಾರೆ ಎಂಬುದನ್ನು ಬೇಧಿಸುವ ಕೆಲಸವಾಗಿದೆ. ಎಲ್ಲವನ್ನೂ ರಾಜ್ಯ ಹಾಗೂ ಕೇಂದ್ರ ಸರಕಾರ ಗಮನಿಸುತ್ತಿದೆ. ಗುಪ್ತಚರ ಇಲಾಖೆಯಿಂದ ಮತ್ತಷ್ಟು ವಿಸ್ತೃತ ಕೆಲಸ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದರು.