ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಉಡುಪಿ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸಶಕ್ತ ಸಮಾಜಕ್ಕಾಗಿ ಸಶಕ್ತ ನಾರಿ ಎಂಬ ಅಡಿ ಬರಹದೊಂದಿಗೆ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಂದ ಮಿಷನ್ ಸಾಹಸ ಪ್ರದರ್ಶನ ನಡೆಯಿತು.
ಕಳೆದ ಒಂದು ವಾರದಿಂದ ನಗರದ ಪ್ರಮುಖ ಕಾಲೇಜಿನಲ್ಲಿ ಎಬಿವಿಪಿ ಮತ್ತು ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಜಂಟಿ ಸಹಯೋಗದಲ್ಲಿ ಉಚಿತವಾಗಿ ಕರಾಟೆ ತರಬೇತಿಯನ್ನು ನೀಡಲಾಗಿತ್ತು. ಇಂದು 800ಕ್ಕೂ ಅಧಿಕ ವಿದ್ಯಾರ್ಥಿನಿಯರು ಏಕಕಾಲದಲ್ಲಿ ಸಾಹಸ ಪ್ರದರ್ಶಿಸಿದರು.
ಕಾರ್ಯಕ್ರಮವನ್ನು ಉಡುಪಿ ಮಹಿಳಾ ಪೋಲಿಸ್ ಠಾಣಾ ಉಪನಿರೀಕ್ಷಕಿ ವೈಲೆಟ್ ಫೆಮಿನಾ ಉದ್ಘಾಟಿಸಿ, ವಿದ್ಯಾರ್ಥಿನಿಯರಿಗೆ ಸಮಸ್ಯೆ ಉಂಟಾದಾಗ ಸಮಯಪ್ರಜ್ಞೆಯಿಂದ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.
ಹೊಸಬೆಳಕು ಸೇವಾ ಟ್ರಸ್ಟ್ ಸಂಸ್ಥಾಪ ತನುಲಾ ತರುಣ್ ಮಾತನಾಡಿದರು. ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಎಬಿವಿಪಿ ಕರ್ನಾಟಕ ಪ್ರಾಂತ ಕಾರ್ಯ ಸಮಿತಿ ಸದಸ್ಯ ಡಾ. ರವಿ ಮಂಡ್ಯ, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಜಿಲ್ಲಾ ಕೋಶಾಧಿಕಾರಿ ವಾಮನ್ ಪಾಲನ್, ಮಾಜಿ ಅಧ್ಯಕ್ಷ ರವಿ ಸಾಲಿಯಾನ್, ಜಿಲ್ಲಾ ಕಾರ್ಯದರ್ಶಿ ರೋಹಿತಾಕ್ಷ ಉದ್ಯಾವರ ಉಪಸ್ಥಿತರಿದ್ದರು.