ಉಡುಪಿ: ಭಾರತದ ಶಿಲ್ಪಕಲೆಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ ಜಕಣಾಚಾರಿ ಅಮರಶಿಲ್ಪಿ ಎಂದೇ ಗುರುತಿಸಲ್ಪಟ್ಟಿದ್ದಾರೆ. ಅವರ ಕಲ್ಪನೆಗೆ ಬೇಲೂರು, ಹಳೇಬೀಡು ಸಾಕ್ಷಿಯಾಗಿ ಉಳಿದಿದೆ. ಇದನ್ನು ನವಪೀಳಿಗೆಗೆ ತಿಳಿಸುತ್ತಾ ಮುಂದಿನ ಜನಾಂಗಗಳಿಗೂ ಬಳುವಳಿಯಾಗಿ ಬಿಟ್ಟು ಹೋಗುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಜಕಣಾಚಾರಿಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ಜಕಣಾಚಾರಿ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿರದೆ. ಕಲಾಭಿರುಚಿರುವ ಸರ್ವ ಜನಾಂಗವೂ ಗೌರವವಿಸಬೇಕಾದ ಕಲಾ ಪೂಜಕ ಮತ್ತು ಅಮರಶಿಲ್ಪಿ ಎಂದು ಬಣ್ಣಿಸಿದರು.
ಹರೀಶ್ ಆಚಾರ್ಯ ಉಪನ್ಯಾಸ ನೀಡಿದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಡುಪಿ ಜಿಲ್ಲಾ ಅಧ್ಯಕ್ಷರಾದ ನೇರಂಬಳ್ಳಿ ರಮೇಶ್ ಆಚಾರ್ಯ ಮತ್ತು ಬೈಂದೂರು ತಾಲ್ಲೂಕು ಅಧ್ಯಕ್ಷರಾದ ನಾರಾಯಣ ಆಚಾರ್ಯ ಮಾತನಾಡಿದರು. ಗೌರವಾಧ್ಯಕ್ಷದರಾದ ಗಂಗಾಧರ ಆಚಾರ್ಯ ಹಾಗೂ ವಿಶ್ವಕರ್ಮ ಸಮುದಾಯ ಸದಸ್ಯರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಬಿ.ಎ.ಆಚಾರ್ಯ ಮಣಿಪಾಲ ವಂದಿಸಿದರು.