ಉಡುಪಿ: ಉಡುಪಿ ಎಪಿಎಂಸಿಯ ಅಧಿಕಾರಿಗಳ ಅವ್ಯವಹಾರ ಮತ್ತು ಭ್ರಷ್ಟಾಚಾರ ಖಂಡಿಸಿ ಉಡುಪಿ ಎಪಿಎಂಸಿ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ಆದಿಉಡುಪಿ ಎಪಿಎಂಸಿ ಪ್ರಾಂಗಣದಲ್ಲಿ ಇಂದು ಅಹೋರಾತ್ರಿ ಧರಣಿ ಆರಂಭಗೊಂಡಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇಲ್ಲಿ ಗೋದಾಮು ಪಡೆದ ವ್ಯಕ್ತಿಯು ಮೂರು ವರ್ಷಗಳ ಹಿಂದೆ ಮರಣ ಹೊಂದಿದ್ದರೂ ಈಗಲೂ ಅವರ ಹೆಸರಲ್ಲಿ ಸಣ್ಣ ಮೊತ್ತದ ಬಾಡಿಗೆ ಪಡೆಯಲಾಗುತ್ತದೆ.
ಇನ್ನು ಏಳೆಂಟು ಲಕ್ಷ ಮಾರುಕಟ್ಟೆ ಮೌಲ್ಯವಿರುವ ಇಲ್ಲಿಯ ಭೂಮಿಯನ್ನು ಕೇವಲ ಒಂದು ಲಕ್ಷ ಚಿಲ್ಲರೆ ಹಣಕ್ಕೆ ಲೀಸ್ ಗೆ ನೀಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ, ಓರ್ವ ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಲೈಸನ್ಸ್ ಗಾಗಿ ನಲ್ವತ್ತು ಸಾವಿರ ರೂ.ಹಣ ವಸೂಲು ಮಾಡಲಾಗಿದೆ. ಇಂತಹ ಹಲವು ಭ್ರಷ್ಟಾಚಾರಗಳು ಇಲ್ಲಿ ನಡೆಯುತ್ತಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಸಮಿತಿ ಸದಸ್ಯರು ಆರೋಪಿಸಿದರು.
ಇದರ ವಿರುದ್ಧ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಭ್ರಷ್ಟ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು ಮತ್ತು ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ತನಿಖೆ ನಡೆಸಬೇಕು ಎಂದು ಎಪಿಎಂಸಿ ರಕ್ಷಣಾ ಸಮಿತಿಯ ವಿಜಯ್ ಕೊಡವೂರು ಒತ್ತಾಯಿಸಿದರು.