ಉಡುಪಿ: ಪಾಂಗಾಳದಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಶರತ್ ಶೆಟ್ಟಿ (39) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವಾರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ತಿಳಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್ ಕುಳಾಯಿ ನಿವಾಸಿಗಳಾದ 20ವರ್ಷದ ದಿವೇಶ್ ಶೆಟ್ಟಿ ಮತ್ತು 21ವರ್ಷದ ಲಿಖಿತ್ ಕುಲಾಲ್, ಮಂಗಳೂರು ನಿವಾಸಿ 24ವರ್ಷದ ಆಕಾಶ್ ಕರ್ಕೇರ ಹಾಗೂ ಪಣಂಬೂರು ನಿವಾಸಿ 40ವರ್ಷದ ಪ್ರಸನ್ನ ಶೆಟ್ಟಿ ಬಂಧಿತ ಆರೋಪಿಗಳು. ಇವರಲ್ಲಿ ದಿವೇಶ್ ಮತ್ತು ಲಿಖಿತ್ ನನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆಕಾಶ್ ಮತ್ತು ಪ್ರಸನ್ನ ಶೆಟ್ಟಿಯನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದರು.
ಕಟಪಾಡಿ ನಿವಾಸಿ ಯೋಗೀಶ್ ಆಚಾರ್ಯ, ನಾಗರಾಜ್, ಭೂಗತ ಪಾತಕಿ ಕಲಿ ಯೋಗೀಶ್ ಮತ್ತು ಕೃತ್ಯಕ್ಕೆ ಸಹಕರಿಸಿದ ಮುಕೇಶ್ ಹಾಗೂ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ ಎಂದರು.
ಕಳೆದ ಡಿಸೆಂಬರ್ ನಲ್ಲಿ ಕೊಲೆಯಾದ ಶರತ್ ಶೆಟ್ಟಿ ಹಾಗೂ ಆತನ ಸ್ನೇಹಿತನಾಗಿದ್ದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ಜಾಗವೊಂದರ ತಕರಾರಿಗೆ ಸಂಬಂಧಿಸಿ ಮಾತುಕತೆ ಹೋಗಿದ್ದರು. ಈ ವೇಳೆ ಅಲ್ಲಿ ನಡೆದ ಗಲಾಟೆ ನಡೆದಿದ್ದು, ಅಲ್ಲಿ ಯೋಗೀಶ್ ಮೇಲೆ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದ್ದರು. ಆದರೆ, ಶರತ್ ಶೆಟ್ಟಿ, ಯೋಗೀಶ್ ಸಹಾಯಕ್ಕೆ ಬಾರದೆ ಅಲ್ಲಿಂದ ಪರಾರಿಯಾಗಿದ್ದನು. ಈ ಘಟನೆಯಲ್ಲಿ ಯೋಗೀಶ್ ಆಚಾರ್ಯ ಹಲ್ಲೆಗೊಳಗಾಗಿದ್ದು, ಆತನ ವಿರುದ್ಧವೇ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆ ಬಳಿಕ ಶರತ್ ಶೆಟ್ಟಿ ವಿರುದ್ಧ ಯೋಗೀಶ್ ಆಚಾರ್ಯ ಕೋಪಗೊಂಡಿದ್ದನು. ಶರತ್ ಶೆಟ್ಟಿಯನ್ನು ಹತ್ಯೆಗೈಯುವ ಮಟ್ಟಿಗೆ ಈ ಸೇಡು ಬೆಳೆದಿತ್ತು. ಅದಕ್ಕಾಗಿ ಯೋಗೀಶ್ ಆಚಾರ್ಯನು ಭೂಗತ ಪಾತಕಿ ಕಲಿ ಯೋಗೀಶ್ ಎಂಬಾತ ನೆರವು ಕೇಳುತ್ತಾನೆ. ಅದರಂತೆ ಯೋಗೀಶ್ ಹಾಗೂ ಪಾತಕಿ ಕಲಿ ಯೋಗೀಶ್ ಸೇರಿ ಕೊಲೆಗೆ ಸಂಚು ರೂಪಿಸುತ್ತಾರೆ. ಅದರಂತೆ ದಿವೇಶ್ ಶೆಟ್ಟಿ, ಲಿಖಿತ್, ಆಕಾಶ್ ಹಾಗೂ ಪ್ರಸನ್ನ ಶೆಟ್ಟಿ ಸೇರಿ ಶರತ್ ಶೆಟ್ಟಿಯನ್ನು ಕೊಲೆ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.