ಕುಂದಾಪುರ: ವಿಧಾನಸಭೆ ಚುನಾವಣೆಗೆ ಬೆರಳೆಣಿಕೆ ದಿನಗಳಷ್ಟೆ ಬಾಕಿ ಉಳಿದಿದ್ದು ಕುಂದಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಬಿರು ಬಿಸಿಲಿನಲ್ಲೂ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದಾರೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣೆ ಕಣದಿಂದ ಹಿಂದೆ ಸರಿದಿದ್ದರಿಂದ ಕುಂದಾಪುರದಲ್ಲಿ ಕಳದೆ 30 ವರ್ಷಗಳ ಈಚೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನೇರಾ ನೆರ ಪೈಪೋಟಿ ಕಂಡು ಬಂದಿದೆ.ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿರುವ ದಿನೇಶ್ ಹೆಗ್ಡೆ ಮೊಳಹಳ್ಳಿ ಮತ್ತು ಕಿರಣ್ ಕುಮಾರ್ ಕೊಡ್ಡಿ ಅವರು ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ಪಣತೊಟ್ಟಿದ್ದು ಕಾರ್ಯಕರ್ತರ ದಂಡಿನೊಂದಿಗೆ ಕ್ಷೇತ್ರಾದ್ಯಂದ ಪ್ರಚಾರದ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿ: ಬಿಜೆಪಿ ಕರಾವಳಿ ತೀರದ ಭದ್ರಕೋಟೆಯನ್ನು ಕೈವಶ ಮಾಡಿಕೊಳ್ಳಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಕೆಲಸವನ್ನು ಮಾಡುತ್ತಿದ್ದು ಕುಂದಾಪುರದಲ್ಲಿ ಕಾಂಗ್ರೆಸ್ ಅದಿಪತ್ಯವನ್ನು ಸ್ಥಾಪಿಸಲು ಹವಣಿಸುತ್ತಿದ್ದಾರೆ.
ಮೊಳಹಳ್ಳಿಗೆ ಜಾತಿ ಟ್ರಂಪ್ ಕಾರ್ಡ್: ಬಂಟ ಸಮುದಾಯದ ಪ್ರಬಲ ಮುಖಂಡರಾದ ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿಗೆ ಜಾತಿ ಟ್ರಂಪ್ ಕಾರ್ಡ್ ಆಗಿದೆ.ಕುಂದಾಪುರ ಕ್ಷೇತ್ರದಲ್ಲಿ ಬಂಟ ಸಮುದಾಯವು ಅತ್ಯಧಿಕ ಮತವನ್ನು ಹೊಂದಿದೆ ಜಾತಿ ಬಲವನ್ನು ಪಡೆದುಕೊಂಡು ಇತರ ಸಮುದಾಯಗಳ ವಿಶ್ವಾಸದಿಂದ ಗೆಲುವನ್ನು ಕಂಡುಕೊಳ್ಳಬದ್ದೇನ್ನುವ ಮೊಳಹಳ್ಳಿ ಅವರ ಲೆಕ್ಕಚಾರವಾಗಿದೆ.
ಶಿಷ್ಯನಿಗೆ ಗುರು ಬಲ: ಕಿರಣ್ ಕುಮಾರ್ ಕೊಡ್ಗಿ ಅವರಿಗೆ ರಾಜಕೀಯವಾಗಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಒಂದು ರೀತಿಯಲ್ಲಿ ಗುರುಗಳು ಇದ್ದಂತೆ. ಟಿಕೆಟ್ ಕೈತಪ್ಪಿದರು ಪಕ್ಷದ ವಿರುದ್ಧವಾಗಿ ಅಸಾಮಾಧಾನವನ್ನು ತೋರದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತನ್ನ ಕಾರ್ಯಕರ್ತರ ಪಡೆಯೊಂದಿಗೆ ಶಿಷ್ಯನ ಪರವಾಗಿ ಚುನಾವಣೆ ಕ್ಯಾಂಪೈನ್ನಲ್ಲಿ ಭಾಗವಹಿಸುತ್ತಿದ್ದು ಕಿರಣ್ ಕುಮಾರ್ ಕೊಡ್ಗಿ ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ.
ಶ್ರೀನಿವಾಸ್ ಶೆಟ್ಟರಿಗೆ ಪ್ರತಿಷ್ಠೆ ಪ್ರಶ್ನೆ:ಕುಂದಾಪುರ ಕ್ಷೇತ್ರದಲ್ಲಿ 5 ಬಾರಿ ವಿಜಯವನ್ನು ಕಂಡುಕೊಂಡಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ 2023 ರ ಚುನಾವಣೆ ಒಂದು ರೀತಿಯಲ್ಲಿ ಪ್ರತಿಷ್ಠೆಯ ಪ್ರಶ್ನೆಯಾಗಿ ಕಾಡುತ್ತಿದೆ. ಚುನಾವಣೆ ನೇತೃತ್ವವನ್ನು ವಹಿಸಿ ಕೊಂಡಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಗೆ ಕಿರಣ್ ಕುಮಾರ್ ಕೊಡ್ಗಿ ಗೆಲುವು ಅನಿವಾರ್ಯವಾಗಿದೆ. ಕಿರಣ್ ಕುಮಾರ್ ಕೊಡ್ಗಿ ಜಯಿಸಿದರೆ ಮಾತ್ರ ಹಾಲಾಡಿ ನಾಯಕತ್ವಕ್ಕೆ ಕೇಂದ್ರ ಮಟ್ಟದಲ್ಲಿ ಇನ್ನಷ್ಟು ಮಹತ್ವ ಸಿಗಲಿದೆ.
ಕುಂದಾಪುರದಲ್ಲಿ ಬಿಜೆಪಿ ಸೋತರೆ ಬಿಜೆಪಿ ಭದ್ರಕೋಟೆ ಕಾಂಗ್ರೆಸ್ ಪಾಲಾಗಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕುಂದಾಪುರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ವಿಜಯಲಕ್ಷ್ಮೀ ಗುಪ್ತಗಾಮಿನಿಯಂತೆ ಸಂಚರಿಸುತ್ತಿದ್ದಾಳೆ ಯಾರೆ ಗೆದ್ದರೂ ನಡುವಿನ ಅಂತರ ಮಾತ್ರ ಕಮ್ಮಿ ಇರಲಿದೆ ಎಲ್ಲದಕ್ಕೂ ಫಲಿತಾಂಶ ಉತ್ತರ ನೀಡಲಿದೆ.