ಉಡುಪಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಕಾರ್ಯವು ನಾಳೆ (ಮೇ13ರಂದು) ಬೆಳಿಗ್ಗೆ 8 ಗಂಟೆಯಿಂದ ಚುನಾವಣಾ ವೀಕ್ಷಕರ, ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಮತ್ತು ಅವರ ಏಜೆಂಟರ ಸಮ್ಮುಖದಲ್ಲಿ ನಡೆಯಲಿದೆ.
ಮತ ಎಣಿಕೆಗೆ ಅಗತ್ಯವಿರುವ ಎಲ್ಲಾ ಪೂರ್ವಸಿದ್ಧತೆಗಳನ್ನು ಈಗಾಗಲೇ ಮಾಡಲಾಗಿದೆ. 118-ಬೈಂದೂರು, 119-ಕುಂದಾಪುರ, 120- ಉಡುಪಿ, 121 ಕಾಪು, 122 ಕಾರ್ಕಳ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಉಡುಪಿ ಸೆಂಟ್ ಸಿಸಿಲಿಸ್ ಶಿಕ್ಷಣ ಸಂಸ್ಥೆಯ ಕೊಠಡಿಗಳಲ್ಲಿ ನಡೆಯಲಿದೆ.
ಮತ ಎಣಿಕೆ ಕೊಠಡಿ ವ್ಯವಸ್ಥೆ:
ಮತ ಎಣಿಕೆಯು ಒಟ್ಟು 8 ಬೇರೆ ಬೇರೆ ಕೊಠಡಿಯಲ್ಲಿ ನಡೆಸಲಾಗುತ್ತದೆ. 118-ಬೈಂದೂರು ವಿಧಾನಸಭಾ ಕ್ಷೇತ್ರ ಮತ್ತು 119-ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಹಾಗೂ 120-ಉಡುಪಿ, 121-ಕಾಪು ಹಾಗೂ 122-ಕಾರ್ಕಳ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ತಲಾ ಎರಡು ಕೊಠಡಿಗಳಲ್ಲಿ ನಡೆಸಲಾಗುವುದು. ಮತ ಎಣಿಕೆ ಕೊಠಡಿಗಳಲ್ಲಿ ಮತ ಎಣಿಕೆಯನ್ನು ಸುರಕ್ಷಿತವಾಗಿ ನಡೆಸಲು ಮತ ಎಣಿಕೆ ಅಧಿಕಾರಿ ಹಾಗೂ ಮತ ಎಣಿಕೆ ಏಜೆಂಟರುಗಳ ನಡುವ ಮೆಸ್ ಹಾಕಿ ಸೂಕ್ತ ಭದ್ರತೆಯನ್ನು ಮಾಡಲಾಗಿದೆ. ಮತ ಎಣಿಕೆ ಕೇಂದ್ರಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅಂಚೆ ಮತ ಪತ್ರಗಳ ಎಣಿಕೆ ಚುನಾವಣಾಧಿಕಾರಿಯವರ ಕೊಠಡಿಯಲ್ಲಿ 4 ಪ್ರತ್ಯೇಕ ಮೇಜುಗಳಲ್ಲಿ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಮತ ಎಣಿಕ ಅಧಿಕಾರಿ/ಸಿಬ್ಬಂದಿ ನೇಮಕಾತಿ:
ಮತ ಎಣಿಕೆಯು ಕೆ ಚುನಾವಣಾಧಿಕಾರಿ ಹಾಗೂ 5 ಮಂದಿ ಹಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪ್ರತಿಯೊಂದು ಕೊಠಡಿಗಳಲ್ಲಿ ಜರುಗಲಿದೆ, ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಮತಯಂತ್ರಗಳ ಮತ ಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಜರಗುವ ಅಂಚೆ ಮತಪತ್ರಗಳ ಎಣಿಕೆಗಾಗಿ 4 ಹೆಚ್ಚುವರಿ ಮೇಜುಗಳನ್ನಿರಿಸಿದ್ದು, ಪ್ರತಿಯೊಂದು ಮೇಜಿಗೂ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಮತ ಎಣಿಕೆಗಾಗಿ ಒಟ್ಟು 375 ಮತ ಎಣಿಕೆ ನೇಮಿಸಲಾಗಿದೆ. ಅಧಿಕಾರಿ/ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ.
ಮಾಧ್ಯಮ ಕೇಂದ್ರ:
ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮದವರಿಗೆ ಮತ ಎಣಿಕೆಯ ಪ್ರತಿಯೊಂದು ಸುತ್ತಿನ ಎಣಿಕೆಯ ಫಲಿತಾಂಶದ ಮಾಹಿತಿ ಒದಗಿಸಲು ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಪತ್ರಿಕಾ ಮಾಧ್ಯಮದವರಿಗೆ ಪ್ರತ್ಯೇಕ ಗುರುತಿನ ಚೀಟಿಯನ್ನು ಈ ಕಚೇರಿಯಿಂದ ನೀಡಲಾಗಿದೆ. ಅದನ್ನು ಕಡ್ಡಾಯವಾಗಿ ಧರಿಸತಕ್ಕದ್ದು, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ’ ಇವರನ್ನು ಸಂಪರ್ಕಾಧಿಕಾರಿಯನ್ನಾಗಿ ನೇಮಿಸಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಬ್ಬರು ಸಹಾಯಕರನ್ನು (ರನ್ನ) ಪ್ರತಿ ಸುತ್ತಿನ ಎಣಿಕೆ ಫಲಿತಾಂಶವನ್ನು ಒದಗಿಸಲು ನೇಮಿಸಲಾಗಿದೆ. ವೀಕ್ಷಣೆಗಾಗಿ ದೂರದರ್ಶನ ವ್ಯವಸ್ಥೆ, ಇಂಟರ್ನೆಟ್ ಹಾಗೂ ಕಂಪ್ಯೂಟರ್ ವ್ಯವಸ್ಥೆ ಮಾಡಲಾಗಿದೆ.
ಫಲಿತಾಂಶ ಘೋಷಣೆ ವ್ಯವಸ್ಥೆ :
ಮತ ಎಣಿಕೆ ಕೇಂದ್ರದಲ್ಲಿ ಪ್ರತಿ ಮತ ಎಣಿಕೆ ಕೊಠಡಿಯಲ್ಲಿ ಪ್ರತೀ ಸುತ್ತಿನ ಮತ ಎಣಿಕೆ ಮುಗಿದ ನಂತರ ಪ್ರತೀ ವಿಧಾನಸಭಾ ಕ್ಷೇತ್ರವಾರು ಪ್ರತೀ ಅಭ್ಯರ್ಥಿ ಗಳಿಸಿದ ಮತಗಳ ವಿವರವನ್ನು ಪ್ರತೀ ಸುತ್ತಿನ ಎಣಿಕೆ ಫಲಿತಾಂಶ ಚುನಾವಣಾಧಿಕಾರಿ ಹಾಗೂ ಚುನಾವಣಾ ವೀಕ್ಷಕರ ಅನುಮೋದನೆ ಪಡೆದ ನಂತರ ಆಯಾಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯವರ ಕೊಠಡಿಯ ಪ್ರಕಟಣಾ ಫಲಕದಲ್ಲಿ ದಾಖಲಿಸಲಾಗುತ್ತದೆ. ಅದೇ ರೀತಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತೀ ಸುತ್ತಿನಲ್ಲಿ ಪ್ರತಿ ಅಭ್ಯರ್ಥಿ ಗಳಿಸಿದ ಮತಗಳ ವಿವರವನ್ನು ಒಟ್ಟುಗೂಡಿಸಿ ಒಟ್ಟಾರೆಯಾಗಿ ಪ್ರತೀ ಸುತ್ತಿನಲ್ಲಿ ಪ್ರತೀ ಅಭ್ಯರ್ಥಿ ಗಳಿಸಿದ ಮತಗಳ ವಿವರಗಳನ್ನು ಚುನಾವಣಾಧಿಕಾರಿಯವರ ಕೊಠಡಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗುವುದು ಹಾಗೂ ಮತ ಎಣಿಕೆ ಕೇಂದ್ರದಿಂದ ಹೊರಗಿರುವ ಸಾರ್ವಜನಿಕರ ಮಾಹಿತಿಗಾಗಿ ಧ್ವನಿವರ್ಧಕದ ಮೂಲಕ ಫಲಿತಾಂಶ ಘೋಷಿಸಲಾಗುತ್ತದೆ.
ಮತ ಎಣಿಕೆ ಕಾರ್ಯಕ್ಕಾಗಿ ಚುನಾವಣಾ ಆಯೋಗದಿಂದ 5 ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ವೀಕ್ಷಕರುಗಳನ್ನು ನೇಮಕ ಮಾಡಲಾಗಿದೆ.
ಮತ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಪೋನ್ ನಿಷೇಧ:
ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ಗಳನ್ನು ಕೊಂಡೊಯ್ಯುವುದು ನಿಷೇಧಿಸಲಾಗಿದೆ. ಒಂದು ವೇಳೆ ಮತ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಫೋನ್ಗಳನ್ನು ತಂದಲ್ಲಿ ಅಂತಹ ವ್ಯಕ್ತಿಗಳನ್ನು ಬಂಧಿಸಲಾಗುವುದು.
ನಿಯಂತ್ರಣ ಕೊಠಡಿ / ಭದ್ರತಾ ವ್ಯವಸ್ಥೆ :
ಭದ್ರತೆಯ ದೃಷ್ಠಿಯಿಂದ ಪೊಲೀಸ್ ಕಂಟ್ರೋಲ್ ರೂಮ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಚುನಾವಣಾಧಿಕಾರಿಯಿಂದ ನೀಡಲಾದ ಅಧಿಕೃತ ಗುರುತಿನ ಚೀಟಿ ಇದ್ದಲ್ಲಿ ಮಾತ್ರ ಪ್ರವೇಶಿಸಲು ಅವಕಾಶವಿದೆ. ಮೊಬೈಲ್, ಬೀಡಿ ಸಿಗರೇಟ್, ಬೆಂಕಿಪೊಟ್ಟಣ, ಕತ್ತರಿ, ಸಿಗರ್ಲೈಟ್ಗಳನ್ನು ಕೊಂಡೊಯ್ಯವಂತಿಲ್ಲ. ಭದ್ರತಾ ಸಿಬ್ಬಂದಿಗಳು ತಪಾಸಣೆ ನಡೆಸುವಾಗ ಸಹಕಾರ ನೀಡಬೇಕು. ಮಹಿಳೆಯರನ್ನು ಮಹಿಳಾ ಪೊಲೀಸ್ ಸಿಬ್ಬಂದಿಗಳು ತಪಾಸಣೆ ನಡೆಸುತ್ತಾರೆ. ಮತ ಎಣಿಕೆ ಕೇಂದ್ರದಿಂದ 100 ಮೀಟರ್ ಸುತ್ತಲೂ ವಾಹನ ಸಂಚಾರ ರಹಿತ ಪಾದಾಚಾರಿಗಳ ವಲಯ” ಎಂದು ಗುರುತಿಸಲಾಗಿದೆ.
ಮತ ಎಣಿಕೆ ಏಜೆಂಟರ ನೇಮಕ :
ಮತ ಎಣಿಕೆ ಪರಿಶೀಲನೆಗಾಗಿ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಪ್ರತೀ ಮೇಜಿಗೆ ತಲಾ ಒಬ್ಬರು ಏಜೆಂಟರನ್ನು ನೇಮಿಸಲು ಅವಕಾಶವಿದ್ದು, ಚುನಾವಣಾಧಿಕಾರಿಗಳು, ಅಭ್ಯರ್ಥಿಗಳಿಗೆ ಅಥವಾ ಎಣಿಕ ಏಜೆಂಟರಿಗೆ ನಿಯಮಾನುಸಾರ ಗುರುತಿನ ಚೀಟಿ ವಿತರಿಸಲಾಗಿರುತ್ತದೆ.
ನಿಷೇಧಾಜ್ಞೆ:
ಮತ ಎಣಿಕೆಯ ದಿನ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಚುನಾವಣಾ ಫಲಿತಾಂಶ ಘೋಷಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತ ಮುಂಜಾಗೃತ ಕ್ರಮವಾಗಿ ದಿನಾಂಕ 13.05.2023 ರ ಬೆಳಿಗ್ಗೆ 5.00 ಗಂಟೆಯಿಂದ ದಿನಾಂಕ 13.05.2023 ರ ಮಧ್ಯರಾತ್ರಿ 12.00 ಗಂಟೆಯವರೆಗೆ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯಡಿಯಲ್ಲಿ ಕಲಂ 144 ರ ನಿಷೇಧಾಜ್ಞೆ ಹೊರಡಿಸಲಾಗುತ್ತದೆ. ಈ ವೇಳೆ ಯಾವುದೇ ಸಭೆ, ವಿಜಯೋತ್ಸವ ಮೆರವಣಿಗೆ ನಡೆಸುವಂತಿಲ್ಲ.
ಮದ್ಯ ಮಾರಾಟ ನಿಷೇಧ:
ಮತ ಎಣಿಕೆಯ ದಿನ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಹಾಗೂ ಸಮಾಜ ವಿದ್ರೋಹಿ ಘಟನೆಗಳು ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ದಿನಾಂಕ 12.05.2023 ರ ಮಧ್ಯರಾತ್ರಿ 12.00 ಗಂಟೆಯಿಂದ ದಿನಾಂಕ 13.05.2023 ರ ಮಧ್ಯರಾತ್ರಿ 12.00 ಗಂಟೆಯವರೆಗೆ ಮದ್ಯ ಸಾಗಾಣೆ ಹಾಗೂ ಮಾರಾಟ ನಿಷೇಧಿಸಿ “ಒಣ ದಿನ”(DRY DAY) ಎಂದು ಘೋಷಿಸಲಾಗಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅತ್ಯಂತ ಸನ್ನದ್ಧ ಸ್ಥಿತಿಯಲ್ಲಿರುವ ಇಲ್ಲಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಾರೊಂದರಲ್ಲಿ ಸಾಗಾಟ ಮಾಡುತ್ತಿದ್ದ 2…
ಬಾರ್ನಲ್ಲಿ ಕುಡಿಯಲು ಹೋದವರು ಮತ್ತಿನಲ್ಲಿ ಗಲಾಟೆ ಮಾಡಿಕೊಂಡು ನಶೆಯ ಗುಂಗಿನಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ನೀಡಿದೆ. ಕೇಳಿದಷ್ಟು ಬರ ಪರಿಹಾರ ನೀಡಿಲ್ಲ ಎಂದು ನಾಳೆ…
ಅಂಬುಲೆನ್ಸ್ ಚಾಲಕನಿಗೆ ನಿಯಂತ್ರಣ ಸಿಗದೆ ಮೂರು ಕಾರು ಮತ್ತು ಒಂದು ಬೈಕ್ಗೆ ಸರಣಿಯಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ…
ಮೂತ್ರಪಿಂಡ ಬಳಸಿ ವೈಫಲ್ಯದಿಂದ ಬಳಲುತ್ತಿದ್ದ 39 ವರ್ಷದ ರೋಗಿಯೊಬ್ಬರಿಗೆ ದೆಹಲಿಯ ಸಫ್ದಜಂಗ್ ಆಸ್ಪತ್ರೆಯಲ್ಲಿ ರೊಬೊ ಬಳಸಿ ಯಶಸ್ವಿಯಾಗಿ ಅಂಗಾಂಗ ಕಸಿ…
ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಮುಸ್ಲಿಂ ಮೀಸಲಾತಿ ತೆಗೆಯುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.