ಉಡುಪಿ: ಆದಿಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಖ್ಯ ಮಾರುಕಟ್ಟೆ ಪ್ರಾಂಗಣ ಪ್ರವೇಶಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗ್ರಾಹಕರು, ವ್ಯಾಪರಸ್ಥರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಬುಧವಾರ ಇಲ್ಲಿ ವಾರದ ಸಂತೆ ನಡೆಯುತ್ತದೆ. ಸಾವಿರಾರು ಗ್ರಾಹಕರು ದಿನ ನಿತ್ಯದ ಬಳಕೆಗೆ ಬೇಕಾಗುವ ಹಣ್ಣು ಹಂಪಲು ತರಕಾರಿ, ಬೆಳೆ ಕಾಳು, ಸಾಂಬಾರು ಪದಾರ್ಥಗಳನ್ನು ಹಾಗೂ ಸ್ಥಳೀಯ ರೈತರು ಸಾವಯವವಾಗಿ ಬೇಳೆಸಿದಂತ ತಾಜಾ ತರಕಾರಿಗಳ ಖರೀದಿಸಲು ಬರುತ್ತಾರೆ. ಬಹಳಷ್ಟು ಹಿರಿಯ ನಾಗರಿಕರು ರಸ್ತೆ ಗುಂಡಿಯಲ್ಲಿ ಆಯತಪ್ಪಿ ಬಿದ್ದು ಗಾಯಾಳಾಗಿರುವ ಘಟನೆಗಳು ಇಲ್ಲಿ ನಡೆದಿದೆ.
ಸಾರ್ವಜನಿಕರು ಸಂಬಂಧಪಟ್ಟವರಲ್ಲಿ ಅಳಲು ಹೇಳಿಕೊಂಡರು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಭಟನೆಗೆ ಸಜ್ಜುಗೊಂಡಿರುವ ಸಾರ್ವಜನಿಕರು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಲ್ಲಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.
ಜಿಲ್ಲಾಧಿಕಾರಿ, ಅಥವಾ ಅಪರ ಜಿಲ್ಲಾಧಿಕಾರಿಯವರು ಸಮಸ್ಯೆಯ ಸ್ಥಳವನ್ನು ಪರಿಶೀಲಿಸಿ, ವಾರದ ಸಂತೆ ಮಾರುಕಟ್ಟೆಯಲ್ಲಿ ಉದ್ಭವಿಸಿರುವ ಸಮಸ್ಯೆ ಬಗೆಹರಿಸಬೇಕೆಂದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಆಗ್ರಹ ಪಡಿಸಿದ್ದಾರೆ.