ಉಡುಪಿ: ಎಂಡೋಸಲ್ಫಾನ್ ಪೀಡಿತರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವುದರ ಜೊತೆಗೆ ಸರಕಾರದ ಸೌಲಭ್ಯಗಳನ್ನು ತಲುಪಿಸಿ ಅವರ ಕುಂದು ಕೊರತೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಸೂಚಿಸಿದರು. ಜಿ.ಪಂ.ಸಭಾಂಗಣದಲ್ಲಿ ಎಂಡೋ ಸಂತ್ರಸ್ತರ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಂಡೋಸಲ್ಫಾನ್ ನಿಂದ ಕೆಲವರು ಶಾಶ್ವತ ಅಂಗವೈಕಲ್ಯ ಹೊಂದಿದರೆ, ಕೆಲವರು ಕ್ಯಾನ್ಸರ್, ಅಸ್ತಮಾ, ಚರ್ಮರೋಗ, ಅಪಸ್ಮಾರ ಮೊದಲಾದವುಗಳಿಗೆ ತುತ್ತಾಗು ತ್ತಿದ್ದಾರೆ. ಅವರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ಜತೆಗೆ ಸರಕಾರದ ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಎಂಡೋ ಬಾಧಿತ ಪ್ರದೇಶಗಳಲ್ಲಿ ಇತರ ಕಾಯಿಲೆಗಳು ಇದರಿಂದಲೇ ಉಂಟಾಗಿದೆಯೇ ಎಂಬ ಬಗ್ಗೆ ಸರ್ವೇ ಮಾಡಿಸುವುದರೊಂದಿಗೆ ಅಂಗವಿಕಲರಿಗೆ ನೀಡುವ ಸೌಲಭ್ಯಗಳನ್ನು ಒದಗಿಸುವ ಕುರಿತು ರಾಜ್ಯಮಟ್ಟದ ಮಂಡಳಿಗೆ ಶಿಫಾರಸು ಮಾಡಲು ಸೂಚನೆ ನೀಡಿದರು.
ಎಂಡೋ ಪೀಡಿತ ಅಂಗವಿಕಲರಿಗೆ ಫಿಸಿಯೋಥೆರಪಿ ನೀಡಲು ಶಾಶ್ವತ ಪುರ್ನವಸತಿ ಕೇಂದ್ರವನ್ನು ತೆರೆಯಬೇಕು. ಗುರುತಿನ ಚೀಟಿ ಹಾಗೂ ಪಾಸ್ ತಪ್ಪದೇ ನೀಡಬೇಕು ಎಂದರು.