ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಸುಲ್ಕೇರಿ ಜಂತಿಗೋಳಿ ಪರಾರಿ ನಿವಾಸಿ ಸಂಜೀವ ಶೆಟ್ಟಿಯವರ ಪುತ್ರಿ ಸುಚಿತ್ರಾ ಮತ್ತು ಸುಭಾಷ್ ದಂಪತಿಯ ಎರಡೂವರೆ ವರ್ಷದ ಹೆಣ್ಣು ಮಂಗಳವಾರ ನಾಪತ್ತೆಯಾಗಿದೆ.
ಸುಚಿತ್ರಾ ಅವರು ಮಗುವನ್ನು ಮನೆಯಲ್ಲೇ ಬಿಟ್ಟು ತಾಯಿಯೊಂದಿಗೆ ಹಸುಗಳಿಗೆ ಹುಲ್ಲು ತರಲೆಂದು ತೋಟಕ್ಕೆ ಹೋಗಿದ್ದ ವೇಳೆ ಮಗು ನಾಪತ್ತೆಯಾಗಿದೆ.
ಮನೆಯವರು ಸೇರಿದಂತೆ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಊರವರು ಮಗುವಿನ ಶೋಧಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ವೇಣೂರು ಠಾಣಾ ಎಸ್.ಐ ಲೋಲಾಕ್ಷ ಮತ್ತು ಸಿಬ್ಬಂದಿ ವರ್ಗ ಭೇಟಿ ನೀಡಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಮನೆಯಿಂದ 100 ಮೀಟರ್ ದೂರದಲ್ಲಿ ನದಿಯೊಂದು ಹರಿಯುತ್ತಿದ್ದು, ಮಗು ಆ ಕಡೆಗೇನಾದರೂ ಹೋಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಅಗ್ನಿಶಾಮಕ ದಳದವರು ಮತ್ತು ಸ್ಥಳೀಯ ಮುಳುಗು ತಜ್ಞರು ನದಿಯಲ್ಲಿ ಶೋಧ ನಡೆಸುತ್ತಿದ್ದಾರೆ.