ಮಂಗಳೂರು: ನಳಿನ್ ಕುಮಾರ್ ಕಟೀಲ್ ಅವರು ಕಳೆದ ಹತ್ತು ವರ್ಷಗಳಿಂದ ಸಂಸದರಾಗಿ ಯಾವುದೇ ಮಹಾನ್ ಕೆಲಸವನ್ನು ಮಾಡದೇ ತಮ್ಮ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಎ.ಸಿ.ವಿನಯರಾಜ್ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಪ್ ವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ಕುರಿತು ದಿನಕ್ಕೊಂದು ಕಾರಣ ನೀಡಿ ಜನರ ಹಾದಿಯನ್ನು ತಪ್ಪಿಸುತ್ತಿದ್ದಾರೆ. ಸುರತ್ಕಲ್ ನಿಂದ ತಲಪಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ 10 ವರ್ಷದಿಮದ ಕುಂಟುತ್ತಲೇ ಸಾಗುತ್ತಿದೆ. ಅನೇಕ ಕಡೆ ಸರ್ವಿಸ್ ರಸ್ತೆಗಳು ಇನ್ನು ನಿರ್ಮಾಣವಾಗಿಲ್ಲ. ಹೆದ್ದಾರಿ ಕಾಮಗಾರಿ ಪೂರ್ಣವಾಗದಿದ್ದರೂ ಅನಧಿಕೃತವಾಗಿ ಮತ್ತು ಟೋಲ್ ಗೇಟ್ ನೀತಿ ಉಲ್ಲಂಘಿಸಿ ಮುಕ್ಕಾ ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಸಂಸದರ ವಿರುದ್ಧ ಆರೋಪಿಸಿದರು.
ಕಳೆದ ಹಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಬಳಿ ಭಾವನಾತ್ಮಕ ವಿಚಾರಗಳನ್ನು ಪ್ರಚಾರ ಮಾಡುವ ಮೂಲಕ ಬಿಜೆಪಿಯು ಲೋಕಸಭಾ ಚುನಾವಣೆಯನ್ನು ಗೆಲ್ಲುತ್ತಿದೆ. ಬಿಜೆಪಿಯ ಸಂಸದರು 20ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿ ಎಂದು ಪ್ರಶ್ನೆ ಕೇಳುವಲ್ಲಿಯೇ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ ಹೊರತು ತಾನೇನು ಮಾಡಿದೆ ಎಂಬುದನ್ನು ಹೇಳುತ್ತಿಲ್ಲ ಎಂದರು.
ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ವಿಫಲರಾಗಿದ್ದಾರೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡ್ಯದಿಂದ ಬಂಟ್ವಾಳ ತನಕದ ನಾಲ್ಕು ಪಥಗಳ ಕಾಮಗಾರಿ ಸ್ಥಗಿತಕೊಂಡಿದೆ. ಅದೇ ರೀತಿ ಮಂಗಳೂರು-ಮೂಡಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಯೋಜನೆ ನೆನೆಗುದಿಗೆ ಬಿದ್ದಿದೆ. ಇದೆಲ್ಲದರ ನಡುವೆ ಬಿಜೆಪಿ ಸಂಸದರು ಮಾಜಿ ಶಾಸಕರನ್ನು ದೂರುವುದನ್ನು ಬಿಟ್ಟರೆ ಅವರ ಬಳಿ ಯಾವುದೇ ಉತ್ತರವಿಲ್ಲ ಎಂದರು.
ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಸರ್ವಧರ್ಮ ಸಹಬಾಳ್ವೆ ಚಿಂತನೆಯುಳ್ಳ ಯುವ ಮುಖಂಡ. ದಕ್ಷಿಣ ಕನ್ನಡ ಜನರು ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತ ಹಾಕಬೇಕು ಎಂದು ಕೇಳಿಕೊಂಡರು.