ಮಂಗಳೂರು: ಖಾಸಗಿ ಬಸ್ ಪ್ರಯಾಣ ದರದ ವಿಪರೀತ ಏರಿಕೆಯನ್ನು ವಿರೋಧಿಸಿ, ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ, ಏರಿಸಿದ ಬಸ್ ಪ್ರಯಾಣ ದರವನ್ನು ಕೂಡಲೇ ತಡೆಹಿಡಿದು, ಸಾರಿಗೆ ಪ್ರಾಧಿಕಾರದ ಸಭೆ ಕರೆಯಲು ಒತ್ತಾಯಿಸಿ ದ.ಕ.ಜಿಲ್ಲೆಯ ಜಾತ್ಯಾತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಕಾರ್ಯಕರ್ತರು, ಬಸ್ ಮಾಲಕರ ದುರ್ವರ್ತನೆ ಹಾಗೂ ಜನವಿರೋಧಿಯಾಗಿ ವರ್ತಿಸುತ್ತಿರುವ ಜಿಲ್ಲಾಡಳಿತದ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸಿಪಿಐಎಂ ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ಮಾತನಾಡಿ, ಪೆಟ್ರೋಲಿಯಂ ಉತ್ಪನ್ನಗಳ ಹಾಗೂ ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆಯೇರಿಕೆಯಿಂದಾಗಿ ಕಂಗೆಟ್ಟ ಜನಸಾಮಾನ್ಯರ ಬದುಕಿಗೆ ಬಸ್ ಪ್ರಯಾಣ ದರಯೇರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲಿ ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಪರಿತಪಿಸುತ್ತಿರುವ ದುಡಿಯುವ ಜನತೆಗೆ ಈ ಬಾರಿಯ ಪ್ರಯಾಣ ದರವನ್ನು ಅರಗಿಸಿಕೊಳ್ಳಲು ಸಾದ್ಯವೇ ಇಲ್ಲ.ಇಂತಹ ಸಂದರ್ಭದಲ್ಲಿ ಜನಪರವಾಗಿ ಯೋಚಿಸಬೇಕಾದ ಜಿಲ್ಲಾಡಳಿತ ಬಸ್ ಮಾಲಕರ ಏಜೆಂಟರಂತೆ ವರ್ತಿಸಿರುವುದು ತೀರಾ ಖಂಡನೀಯ* ಎಂದು ಜಿಲ್ಲಾಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಜಿಲ್ಲಾ ವಕ್ತಾರರಾದ ಅಭಿಷೇಕ್ ಉಳ್ಳಾಲ್ ರವರು ಮಾತನಾಡಿ, ಅವಿಭಾಜಿತ ದ.ಕ. ಜಿಲ್ಲೆಯ ಸಂಪ್ರದಾಯದಂತೆ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಬಸ್ ಮಾಲಕರ ಹಾಗೂ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಬಳಿಕ ಬಸ್ ಪ್ರಯಾಣ ದರವನ್ನು ನಿಗದಿಪಡಿಸಬೇಕಾಗಿದ್ದ ಜಿಲ್ಲಾಡಳಿತವು ಸಂಪೂರ್ಣವಾಗಿ ಬಸ್ ಮಾಲಕರ ಕೈವಶವಾಗಿದ್ದು,ತನ್ನ ಮನ ಬಂದಂತೆ ಜನರನ್ನು ದೋಚಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ಸಿಪಿಎಂ ಜಿಲ್ಲಾ ನಾಯಕರಾದ ಸೀತಾರಾಮ ಬೇರಿಂಜ, ಸಿಪಿಐಎಂ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ದಲಿತ ಸಂಘಟನೆಯ ಹಿರಿಯ ನಾಯಕರಾದ ಎಂ.ದೇವದಾಸ್, ಜೆಡಿಎಸ್ ನಾಯಕರಾದ ಸುಮತಿ ಎಸ್.ಹೆಗ್ಡೆ, ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್, ಮುನೀರ್ ಕಾಟಿಪಳ್ಳ, ಜಯಂತಿ ಶೆಟ್ಟಿ, ದಯಾನಂದ ಶೆಟ್ಟಿ ಇತರರು ಇದ್ದರು.