ಸುಳ್ಯ: ಭಾರತ ದೇಶವನ್ನು ಉಳಿಸಲು, ಜನರ ವಿಶ್ವಾಸಕ್ಕೆ ತಕ್ಕಂತೆ ಆಡಳಿತ ನಡೆಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆ ಇದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಸುಳ್ಯದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ಅಂಗವಾಗಿ ನಡೆದ ರೋಡ್ ಶೋ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ, ಕಾಶ್ಮೀರ ಭಾರತದಲ್ಲಿಯೇ ಉಳಿಯಲು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮತ್ತು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಹಾಗೂ ದೇಶ ಅಭಿವೃದ್ಧಿಯೆಡೆಗೆ ಸಾಗಲು ನರೇಂದ್ರ ಮೋದಿಯವರಂತಹ ವಿಶ್ವ ನಾಯಕ ದೇಶದ ಪ್ರಧಾನಿಯಾಗಿರಬೇಕು. ಆ ನಂಬಿಕೆ ಜನರಲ್ಲಿ ಇರುವುದರಿಂದಲೇ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಜನತೆ ಬಯಸಿದ್ದಾರೆ. ಕಳೆದ ಐದು ವರ್ಷದಲ್ಲಿ ದೇಶದಲ್ಲಿ ಅದ್ಭುತ ಅಭಿವೃದ್ಧಿ ಕೆಲಸಗಳು ನಡೆದಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಪರಿವರ್ತನೆ ಸಾಧ್ಯವಾಗಿದೆ ಎಂದರು.
ಕಳೆದ 10 ವರ್ಷದಲ್ಲಿ ಸಂಸದನಾಗಿ ಆದರ್ಶ ಮತ್ತು ಭ್ರಷ್ಟಾಚಾರ ರಹಿತ ರಾಜಕಾರಣ ಮಾಡಿದ್ದೇನೆ. ಜಿಲ್ಲೆಯ, ನೆಲ, ಜಲ, ಸಂಸ್ಕೃತಿಯ ಉಳಿವಿಗೆ ಹೋರಾಟ ನಡೆಸಿದ್ದೇನೆ. ಐದು ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಗೆ 16,520 ಕೋಟಿ ಅನುದಾನ ತರಿಸಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯದ ನಂಬರ್ ವನ್ ಜಿಲ್ಲೆಯನ್ನಾಗಿ ಮಾಡಲು ಮತ್ತೊಮ್ಮೆ ಜನತೆ ಆಶೀರ್ವಾದ ಮಾಡಬೇಕು ಎಂದು ಅವರು ಹೇಳಿದರು.
ಶಾಸಕ ಎಸ್.ಅಂಗಾರ ಮಾತನಾಡಿ ಕಳೆದ 60 ವರ್ಷದಲ್ಲಿ ಆಡಳಿತ ನಡೆಸಿ ಏನೂ ಮಾಡದ ಕಾಂಗ್ರೆಸಿಗರು ಮತ ಕೇಳುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ಕೇವಲ ಟೀಕೆ ಮಾಡುವುದಷ್ಟೇ ಅವರ ಕೆಲಸವಾಗಿದೆ. ಜಿಲ್ಲೆಯಲ್ಲಿ ತೀವ್ರ ಸಮಸ್ಯೆಯಾಗಿರುವ ಮರಳಿನ ಸಮಸ್ಯೆಯನ್ನು ಪರಿಹರಿಸಲು ಕೂಡ ಕಾಂಗ್ರೆಸ್ ಆಡಳಿತದಿಂದ ಸಾಧ್ಯವಾಗಿಲ್ಲ. ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದಲೇ ಜನ ಸಾಮಾನ್ಯರಿಗೆ ಮರಳಿನ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿದರು.
ನಳಿನ್ ರೋಡ್ ಶೋ
ನಳಿನ್ಕುಮಾರ್ ಕಟೀಲ್ ಸುಳ್ಯದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಅಬ್ಬರದ ಚುನಾವಣಾ ಪ್ರಚಾರ ಕೈಗೊಂಡರು. ನಗರದ ಜ್ಯೋತಿ ವೃತ್ತದಿಂದ ಆರಂಭಗೊಂಡ ರೋಡ್ ಶೋದಲ್ಲಿ ಅಭ್ಯರ್ಥಿ ನಳಿನ್ಕುಮಾರ್ ಕಟೀಲ್ ಮತ್ತು ಬಿಜೆಪಿ ನಾಯಕರು, ನೂರಾರು ಮಂದಿ ಮಹಿಳೆಯರು, ಕಾರ್ಯಕರ್ತರು ಭಾಗವಹಿಸಿದರು. ನಗರದ ಮುಖ್ಯ ರಸ್ಥೆಯಲ್ಲಿ ಸಾಗಿದ ರೋಡ್ ಶೋ ಶ್ರೀರಾಂ ಪೇಟೆ, ಬಸ್, ನಿಲ್ದಾಣದ ಮೂಲಕ ಗಾಂಧೀನಗರದ ವರೆಗೆ ತೆರಳಿ ಅಲ್ಲಿಂದ ಹಿಂತಿರುಗಿ ಬಂದು ನಗರದ ಬಸ್ ನಿಲ್ದಾಣದ ಬಳಿಯಲ್ಲಿ ಸಮಾವೇಶಗೊಂಡಿತು. ನಳಿನ್ಕುಮಾರ್ ಕಟೀಲ್, ಶಾಸಕ ಎಸ್.ಅಂಗಾರ ಮತ್ತಿತರ ನಾಯಕರು ಮತ್ತು ಮಹಿಳೆಯರೂ ಸೇರಿದ ಕಾರ್ಯಕರ್ತರು ಕೇಸರಿ ಪೇಟ ಧರಿಸಿ ಗಮನ ಸೆಳೆದರು. ಕೇರಳದ ಚೆಂಡೆ ಮೇಳದ ಅಬ್ಬರಕ್ಕೆ ಮೋದಿ ಮೋದಿ ಘೋಷಣೆ ರೋಡ್ ಶೋಗೆ ಸಾಥ್ ನೀಡಿದವು.
ಶಾಸಕ ಎಸ್.ಅಂಗಾರ, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರು, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಪುಷ್ಪಾವತಿ ಬಾಳಿಲ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಹೆಗ್ಡೆ, ಸುಬೋದ್ ಶೆಟ್ಟಿ ಮೇನಾಲ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಶ್ ಕಣೆಮರಡ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಭಾಗೀರಥಿ ಮುರುಳ್ಯ, ವೆಂಕಟ್ ದಂಬೆಕೋಡಿ, ಮತ್ತಿತರರು ಉಪಸ್ಥಿತರಿದ್ದರು. ರೋಡ್ ಶೋ ಆರಂಭಕ್ಕೆ ಮುನ್ನ ನಳಿನ್ಕುಮಾರ್ ಕಟೀಲು, ಶಾಸಕ ಎಸ್.ಅಂಗಾರ ಮತ್ತಿತರರು ನಗರದ ಕಲ್ಕುಡ ದೈವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.