ಬೆಳ್ತಂಗಡಿ: ಜನ ಸಾಮಾನ್ಯರಿಗೆ ಅತೀ ಕಡಿಮೆ ದರದಲ್ಲಿ ಔಷಧವನ್ನು ಪ್ರಧಾನಮಂತ್ರಿ ಭಾರತೀಯ ಜನಔಷಧಿ ಕೇಂದ್ರ ವಿತರಿಸುತ್ತಿದ್ದು ಇದರ ಸೌಲಭ್ಯವನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಕೆ. ವಸಂತ ಬಂಗೇರ ತಿಳಿಸಿದರು.
ಅವರು ಬೆಳ್ತಂಗಡಿ ಸಂತೋಮ್ ಟವರ್ ನಲ್ಲಿ ಅನುಗ್ರಹ ಜನಸೇವಾ ನೆಮ್ಮದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯ 15 ಸಾವಿರ ರೂ. ನ ಚುಚ್ಚು ಮದ್ದು 2 ಸಾವಿರ ರೂ.ಗೆ ದೊರೆಯುತ್ತದೆ. ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ಜನರಿಕ್ ಔಷಧ ಕೇಂದ್ರ ತೆರೆದಿದ್ದು, ಅಲ್ಲಿಯೂ ಸೇವೆ ಸಿಗುತ್ತಿದೆ. ಇಲ್ಲಿಗೆ ಬೇಡಿಕೆಯಷ್ಟು ಔಷಧ ಪೂರಕೈ ಇಲ್ಲವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು, ಆರೋಗ್ಯ ವೃದ್ಧಿಗೆ ಇಂತಹ ಸೇವಾ ಕೇಂದ್ರಗಳು ಸಹಕಾರಿಯಾಗಿದೆ. ಅತೀ ಕಡಿಮೆ ದರದಲ್ಲಿ ಸಿಗುವ ಔಷಧಿಯನ್ನು ತಾಲೂಕಿನ ಜನತೆ ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಬಿಪಿಪಿಐ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ರಾಜ್ಯದ ಹಿರಿಯ ಮಾರುಕಟ್ಟೆ ಅಧಿಕಾರಿ ಡಾ| ಅನಿಲಾ ಬಿ. ಅವರು, ಯಾರು ಬೇಕಾದರೂ ಜನೌಷಧಿ ಕೇಂದ್ರವನ್ನು ತೆರಯಬಹುದು. ಆದರೆ ವ್ಯಾಪಾರ ದೃಷಿಕೋನದಿಂದ ತೆರೆದರೆ ಯಾವುದೇ ಲಾಭ ಇಲ್ಲ. ಸೇವಾ ಮನೋಭಾವ ಇರುವವರು ತೆರೆಯಬಹುದು ಎಂದರು.
ಜನಔಷಧಿಕೇಂದ್ರವನ್ನು ಸಂಸದ ನಳಿನ್ ಕುಮಾರ್ ಅವರು ಉದ್ಘಾಟಿಸಿದರು. ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಸಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ ಉಪಸ್ಥಿತರಿದ್ದರು. ಅನುಗ್ರಹ ಎಜ್ಯುಕೇಶನ್ ಸೋಶಿಯಲ್ ವೆಲ್ಫೆರ್ ಟ್ರಸ್ಟಿನ ಚೇರ್ಮೆನ್ ಎಂ.ಜಿ. ತಲ್ಹತ್ ಪ್ರಾಸ್ತಾವಿಸಿ ಮಾತನಾಡಿದರು. ಟ್ರಸ್ಟಿನ ಆಡಳಿತ ನಿರ್ದೇಶಕ ಅಶ್ರಫ್ ಆಲಿಕುಂಞಿ ಕಾರ್ಯಕ್ರಮು ನಿರ್ವಹಿಸಿ, ವಂದಿಸಿದರು.