ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿಯ ಕೆದ್ದುವಿನ ಮನೆಯೊಂದರ ಸ್ನಾನಗೃಹದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ.
ಕೆದ್ದು ನಿವಾಸಿ ಗೋಪಾಲಕೃಷ್ಣ ಭಟ್ ಅವರ ಜಿ.ಕೆ.ಫಾರ್ಮ್ಸ್ ಮನೆಯ ಸ್ನಾನ ಗೃಹದಲ್ಲಿ ಗುರುವಾರ ಬೆಳಿಗ್ಗೆ ಹಾವು ಪತ್ತೆಯಾಗಿದೆ.
ಮನೆಯ ಸದಸ್ಯರು ಮುಖ ತೊಳೆಯಲು ಸ್ನಾನ ಗೃಹಕ್ಕೆ ಹೋದಾಗ ಒಳಗಡೆಯಿಂದ ಶಬ್ದ ಕೇಳಿಸಿದ್ದು, ಅತಂಕದಿಂದ ಹೊರಗಡೆ ಓಡಿ ಬಂದಿದ್ದಾರೆ. ನಂತರ ಪರಿಶೀಲನೆ ನಡೆಸಿದಾಗ ಕಾಳಿಂಗ ಸರ್ಪ ಕಂಡಿತ್ತು. ತಕ್ಷಣ ಲಾಯಿಲ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ, ಮಾಹಿತಿ ತಿಳಿಸಿ ಮನೆಗೆ ಕರೆಸಲಾಗಿತ್ತು.
ಹಾವನ್ನು ಹಿಡಿಯಲು ಯತ್ನಿಸಿದಾಗ ಸ್ನೇಕ್ ಅಶೋಕ್ ಮೇಲೆಯೇ ದಾಳಿಗೆ ಮುಂದಾಗಿದೆ. ಆಗ ಅವರು ತನ್ನಲ್ಲಿದ್ದ ರಕ್ಷಣಾ ಕೋಲು ಎಸೆದು, ಹಿಂದಕ್ಕೆ ಸರಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ನಂತರ ಕಾಳಿಂಗವನ್ನು ಸ್ನಾನ ಗೃಹದಿಂದ ಹೊರಗಡೆ ತಂದು ಗೋಣಿಚೀಲಕ್ಕೆ ಹಾಕಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.