ಯಾದಗಿರಿ : ತನ್ನೊಂದಿಗೆ ಸಂಬಂಧವಿಟ್ಟುಕೊಳ್ಳಲು ನಿರಾಕರಿಸಿದಾಗ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಜನಮಾನಸದಲ್ಲಿ ಮರೆಯಾಗುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ವಿಲಕ್ಷಣ ಘಟನೆ ಶನಿವಾರ ನಡೆದಿದೆ.
ಅಕ್ರಮ ಸಂಬಂಧ ಹೊಂದಲು ನಿರಾಕರಿಸಿದ ಮಹಿಳೆಗೆ ಗಾಜಿನ ಬಾಟಲ್ನಿಂದ ತಿವಿದ ಪುಂಡನೊಬ್ಬ ಸ್ಥಳದಿಂದ ಪರಾರಿಯಾದ್ದಾನೆ. ವಡಿಗೇರಾ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ದಲಿತ ವರ್ಗಕ್ಕೆ ಸೇರಿದ 28 ವರ್ಷದ ಮಹಿಳೆ ಮಲ್ಲಮ್ಮ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಗ್ರಾಮದ ಯಂಕಣ್ಣ ದೊರೆ (30) ಅಕ್ರಮ ಸಂಬಂಧ ಹೊಂದಲು ಪ್ರಯತ್ನ ನಡೆಸಿದ್ದ. ಗ್ರಾಮದಲ್ಲಿ ಆಕೆ ಸಂಚರಿಸುವಾಗಲೆಲ್ಲ ಹಿಂದೆ ಬಿದ್ದು ಪೀಡಿಸುತ್ತಿದ್ದ. ಮೂರು ಮಕ್ಕಳ ತಾಯಿಯಾದ ಆಕೆ ಈತನೊಂದಿಗೆ ಸಂಬಂಧ ಬೆಳೆಸಲು ನಿರಾಕರಿಸಿದ್ದಳು. ಅಲ್ಲದೆ ಗ್ರಾಮದಲ್ಲಿ ಈ ಬಗ್ಗೆ ಮುಖಂಡರು ಪಂಚಾಯಿತಿ ಸೇರಿ ಇನ್ನು ಮುಂದೆ ಹೀಗೆ ಮಾಡಬೇಡ ಎಂದು ಯಂಕಣ್ಣನಿಗೆ ಬುದ್ದಿವಾದ ಹೇಳಿದ್ದರಂತೆ.
ಪಂಚಾಯಿತಿ ಕಟ್ಟೆಯಲ್ಲಿ ತನಗಾದ ಅವಮಾನ ಸಹಿಸದೆ, ಶನಿವಾರ ಆಂಜನೆಯ ದೇವಸ್ಥಾನಕ್ಕೆ ಬಂದಿದ್ದ ಮಹಿಳೆ ಮೇಲೆ ಎರಗಿದ ಯಂಕಣ್ಣ ಖಾಲಿ ಮದ್ಯದ ಬಾಟಲ್ ಒಡೆದು ಹೊಟ್ಟೆಗೆ ತಿವಿದು ಸ್ಥಳದಿಂದ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಆಕೆಯನ್ನು ಗ್ರಾಮಸ್ಥರು ಜಿಲ್ಲಾಸ್ಪತ್ರಗೆ ದಾಖಲಿಸಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ವಡಿಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶ ಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇಂಥ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಜನತೆ ಆರೋಪಿಸಿದ್ದಾರೆ.