ಹೊಸಪೇಟೆ (ವಿಜಯನಗರ) : ‘ಹುಬ್ಬಳ್ಳಿಯಲ್ಲಿ ಹಿಂದೂಗಳ ಮನೆ ಮೇಲೆ ದಾಳಿಯಾಗಿದೆ. ಅದರ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ನವರು ಎಲ್ಲಿದ್ದಾರೆ?’ ಹೀಗೆಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಪ್ರಶ್ನಿಸಿದರು.
ಈ ಹಿಂದೆ ಕಲ್ಲಂಗಡಿ ಅಂಗಡಿ ಹಾಳುಗೆಡವಿದರು ಎಂದು ಕಾಂಗ್ರೆಸ್ನವರು ಪ್ರತಿಭಟನೆ ಮಾಡಿದ್ದರು. ಈಗ ಹುಬ್ಬಳ್ಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡುವುದಿಲ್ಲವೇ? ಓಟ್ ಬ್ಯಾಂಕ್ ರಾಜಕೀಯ ಮಾಡಲಾಗುತ್ತಿದೆ. ಪ್ರಚೋದನೆಯಿಂದಲೇ ಡಿ.ಜೆ.ಹಳ್ಳಿಯಲ್ಲಿ ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಇಡಲಾಗಿತ್ತು. ಆಗ ಕೂಡ ಕಾಂಗ್ರೆಸ್ನವರು ಏನೂ ಮಾತನಾಡಿರಲಿಲ್ಲ ಎಂದು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ವಾಟ್ಸ್ಯಾಪ್ನಲ್ಲಿ ಸ್ಟೇಟಸ್ ಹಾಕಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆದರೂ ಗಲಾಟೆ ಮಾಡಿರುವುದು ಸರಿಯಲ್ಲ. ಹಿಂದೂ, ಮುಸ್ಲಿಂ ಯಾರೇ ಆಗಲಿ ಶಾಂತಿ ಕಾಪಾಡಬೇಕು. ಆದರೆ, ಮತ್ತೆ ಹುಬ್ಬಳ್ಳಿಯಲ್ಲಿ ಶಾಂತಿ ಕದಡುವ ಕೆಲಸವಾಗಿದೆ. ಒಂದು ಧರ್ಮದ ಅವಹೇಳನವಾಗಿದೆ ಎಂದು ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದು ಎಷ್ಟು ಸರಿ ಎಂದು ಕೇಳಿದರು.