ಕೊಪ್ಪಳ: ಡಿಸೆಂಬರ್ 24 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಸಾವಿರಾರು ಹನುಮ ಮಾಲಾಧಾರಿಗಳು ಆಗಮಿಸಿ, ಹನುಮ ಮಾಲೆಯನ್ನು ವಿಸರ್ಜಿಸಲಿದ್ದಾರೆ.
ಹನುಮ ಮಾಲೆ ವಿಸರ್ಜನೆ ದಿನವೇ ನಡೆಯುತ್ತಿದ್ದ ಸಂಕೀರ್ತನಾ ಯಾತ್ರೆ ಎರಡು ದಿನ ಮೊದಲೇ ಗಂಗಾವತಿ ಪಟ್ಟಣದಲ್ಲಿ ನಡೆಯುತ್ತಿದೆ.
ಇಂದು ಮುಂಜಾನೆ ಹತ್ತು ಗಂಟೆಗೆ ಗಂಗಾವತಿ ಪಟ್ಟಣದ ಎಪಿಎಂಸಿಯಿಂದ ಆರಂಭವಾಗಲಿರೋ ಸಂಕೀರ್ತನಾ ಯಾತ್ರೆಯಲ್ಲಿ ಗಂಗಾವತಿ ತಾಲೂಕಿನ ಸಾವಿರಾರು ಹನುಮ ಮಾಲಾಧಾರಿಗಳು ಭಾಗಿಯಾಗಲಿದ್ದಾರೆ. ಹನ್ನೆರಡು ಅಡಿಯ ಆಂಜನೇಯ ಮೂರ್ತಿಯ ಭವ್ಯ ಶೋಭಾಯಾತ್ರೆಯಲ್ಲಿ ಹನುಮ ಮಾಲಾದಾರಿಗಳು ಜೈ ಹನುಮಾನ ಜೈಘೋಷಗಳನ್ನು ಹೊರಡಿಸುತ್ತಾ ಸಾಗಲಿದ್ದಾರೆ.
ಕೋಮು ಸೂಕ್ಷ್ಮ ನಗರವಾಗಿರೋ ಗಂಗಾವತಿ ಪಟ್ಟಣದಲ್ಲಿ ಇಂದು ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳು ಹನುಮ ಮಾಲೆ ಅಂಗವಾಗಿ ಸಂಕೀರ್ತನಾ ಯಾತ್ರೆ ಹಮ್ಮಿಕೊಂಡಿವೆ.
ಗಂಗಾವತಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್: ಕೊಪ್ಪಳ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯಶೋದಾ ವಂಟಗೋಡಿ ಗಂಗಾವತಿ ನಗರದಲ್ಲಿಯೇ ಬೀಡು ಬಿಟ್ಟಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದ್ದಾರೆ.