ಕೊಪ್ಪಳ: ರಾಜ್ಯದಲ್ಲಿರುವ ಸಾವಿರಕ್ಕೂ ಅಧಿಕ ಅನಧಿಕೃತ ಚರ್ಚಗಳನ್ನು ಸರ್ಕಾರ ತೆರವುಗೊಳಿಸದಿದ್ದರೆ ತಾವೇ ತಂಡ ಕಟ್ಟಿಕೊಂಡು ಬುಲ್ಡೋಜರ್ ಸಹಾಯದಿಂದ ನೆಲಸಮ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡತನವನ್ನೇ ಬಂಡವಾಳ ಮಾಡಿಕೊಂಡು ಲಂಬಾಣಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗುತ್ತಿರುವ ವಿರುದ್ಧ ಹೋರಾಟ ನಡೆಸಬೇಕು, ಮತಾಂತರವನ್ನು ದೇಶಕ್ಕೆ ಅಂಟಿಕೊಂಡ ವೈರಸ್ ಎಂದು ಬಣ್ಣಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಸ್ಲಿಮ್ ಓಲೈಕೆಯ ಬಗ್ಗೆ ಮಾತನಾಡುತ್ತ, ಬಜೆಟ್ನಲ್ಲಿ ಚರ್ಚ್ ಮತ್ತು ಮಂಗಳೂರಿನ ಹಜ್ ಭವನಕ್ಕೆ ನೂರಾರು ಕೋಟಿ ಘೋಷಿಸಲಾಗಿದೆ. ಆದರೆ ರಾಮಮಂದಿರ ಅಭಿವೃದ್ಧಿಗೆ ಒಂದು ನಯಾಪೈಸೆಯನ್ನೂ ನೀಡಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಿರ್ನಾಮವಾಗುತ್ತಿರುವ ಪಕ್ಷ. ರಾಮಮಂದಿರದ ಆನಂದ ಸಹಿಸಲು ಅವರಿಗೆ ಆಗುತ್ತಿಲ್ಲ. ರಾಮನ ವಿರುದ್ಧ ಮಾತಾಡಿದವರಿಗೆ ಶಾಪ ತಟ್ಟುತ್ತದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.