ಕೊಪ್ಪಳ: ಕೊಪ್ಪಳ ಜಿಲ್ಲಾ ಆಸ್ಪತ್ರೆಯ ನರ್ಸ್ ಮಗು ಮಾರಾಟ ಮಾಡಿದ್ದಾಳೆಂದು ಆರೋಪಿಸಲಾಗುತ್ತಿದೆ. ಕೊಪ್ಪಳ ಜಿಲ್ಲಾ ಆಸ್ಪತ್ರೆ, ಕೊಪ್ಪಳ ನಗರದಲ್ಲಿರುವ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿದೆ. ಇಲ್ಲಿ ತಾಯಿ ಮತ್ತು ಮಕ್ಕಳ ಪ್ರತ್ಯೇಕ ಆಸ್ಪತ್ರೆಯೇ ಇದ್ದು, ಗುಣಮಟ್ಟದ ಚಿಕಿತ್ಸೆ ಇರುವುದರಿಂದ ಅನೇಕ ಕಡೆಯಿಂದ ಗರ್ಭಿಣಿಯರು ಹೆರಿಗೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬರುತ್ತಾರೆ.
ಶೂಶ್ರೂಷಕಿಯೊಬ್ಬರು ಆಸ್ಪತ್ರೆಗೆ ದಾಖಲಾಗುವ ಬಡ ಗರ್ಭಿಣಿಯರ ಹೆರಿಗೆ ಆದ ಮೇಲೆ ಮಗು ಮರಣ ಹೊಂದಿದೆ ಎಂದು ಸುಳ್ಳು ಹೇಳುವುದರ ಜೊತೆಗೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಮಾಡಿ, ಅಂತಹ ಮಕ್ಕಳನ್ನು ತಾನೇ ಆರೈಕೆ ಮಾಡಿ, ನಂತರ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ತೈರುನ್ನೀಸಾ ಸೈಯದ್ ಅನ್ನೋ ನರ್ಸ್ ಇಂತಹದೊಂದು ಕೆಲಸ ಮಾಡುತ್ತಿದ್ದಾರೆ ಅಂತ ಆರೋಪಿಸಲಾಗಿದೆ.
2017 ರ ಏಪ್ರಿಲ್ 25 ರಂದು ಹೆರಿಗೆಯಾದ ಗಂಡು ಮಗುವು ಮರಣ ಹೊಂದಿದೆ ಎಂದು ಪಾಲಕರಿಗೆ ತಿಳಿಸಿ, ಮಗುವನ್ನು ತಾನೇ ಆರೈಕೆ ಮಾಡುತ್ತಿದ್ದಾಳೆ ಎಂದು ದಾಖಲೆಗಳೊಂದಿಗೆ ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಿಗೆ 2023 ರ ನ.20 ರಂದು ಅಪರಿಚಿರೊಬ್ಬರು ದೂರು ನೀಡಿದ್ದಾರೆ. ಮಾತ್ರವಲ್ಲದೆ ಈಕೆ ಮನೆಯಲ್ಲಿ 23 ವರ್ಷದ ಯುವಕನೂಬ್ಬ ಇದ್ದು ಈತನನ್ನು ತನ್ನ ಸಹೋದರನೆಂದು ದಾಖಲಾತಿಗಳನ್ನು ಸೃಷ್ಟಿಸಿದ್ದಾರೆ. ಈ ಯುವಕ ಇವರ ಸಹೋದರನಲ್ಲ, ಅದು ಜಿಲ್ಲಾಸ್ಪತ್ರೆಯಲ್ಲಿಯೇ ಕಳವು ಮಾಡಿದ ಶಿಶುವಾಗಿದೆ. ಅಲ್ಲದೆ, ಇನ್ನೊಂದು ಮಗು ತನ್ನದೆಂದು ದಾಖಲಾತಿಗಳನ್ನು ಸೃಷ್ಟಿಸಿದ್ದಾಳೆ ಅಂತ ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಿರ್ದೇಶಕರು 2024 ರ ಜ.1 ರಂದು 6 ಜನರ ಒಳಗೊಂಡ ವಿಚಾರಣಾ ಸಮಿತಿ ರಚಿಸಿದ್ದಾರೆ. ಆದರೆ ತನಿಖಾ ತಂಡ ಇನ್ನು ವರದಿ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ್ ಇಟಗಿ, ದೂರು ಬಂದ ಹಿನ್ನೆಲೆಯಲ್ಲಿ ಇದೀಗ ತನಿಖಾ ತಂಡ ರಚನೆ ಮಾಡಲಾಗಿದೆ. ತನಿಖೆ ನಂತರ ದೂರಿನಲ್ಲಿರುವ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದಿದ್ದಾರೆ.