ಕೊಪ್ಪಳ: ನೈಋತ್ಯ ರೈಲ್ವೆ ವಲಯದ ಮುಖ್ಯ ಅಭಿಯಂತರರು ಚಿತ್ರದುರ್ಗ- ಆಲಮಟ್ಟಿ ರೈಲ್ವೆ ಮಾರ್ಗದ ಎಂಜಿನಿಯರಿಂಗ್ ಮತ್ತು ಪ್ರಾಥಮಿಕ ಸಂಚಾರ ಸಮೀಕ್ಷಾ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದ್ದಾರೆ ಎಂದು ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಹೇಳಿದರು.
ಬೆಂಗಳೂರು-ಸೊಲ್ಲಾಪುರ ರೈಲು ಮಾರ್ಗದ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ನೈರುತ್ಯ ವಲಯವು 264 ಕಿ.ಮೀ ಉದ್ದದ ಚಿತ್ರದುರ್ಗ-ಆಲಮಟ್ಟಿ ರೈಲ್ವೆ ಮಾರ್ಗದ ಎಂಜಿನಿಯರಿಂಗ್ ಮತ್ತು ಸರ್ವೇ ಕಾರ್ಯವನ್ನು ಕೈಗೊಂಡಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸ ಮಾರ್ಗವು ಚಿತ್ರದುರ್ಗ, ವಿಜಯನಗರ, ಕೊಪ್ಪಳ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪ್ರಮುಖ ಸ್ಥಳಗಳಾದ ಹೊಸಹಳ್ಳಿ, ಕೂಡ್ಲಿಗಿ, ಕೊಪ್ಪಳ, ಕುಷ್ಟಗಿ, ಹುನಗುಂದ ಮತ್ತು ಕೂಡಲಸಂಗಮದ ಮೂಲಕ ಹಾದುಹೋಗುತ್ತದೆ. 1397 ಹೆಕ್ಟೇರ್ ಒಣ ಭೂಮಿ, 644.88 ಹೆಕ್ಟೇರ್ ನೀರಾವರಿ ಭೂಮಿ ಮತ್ತು 107.48 ಹೆಕ್ಟೇರ್ ನಗರ ಭೂಮಿ ಸೇರಿದಂತೆ ಒಟ್ಟು 2149.36 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಸಂಸದ ವೈ.ದೇವೇಂದ್ರಪ್ಪ, ಪಿ.ಸಿ.ಗದ್ದಿಗೌಡ ಮತ್ತು ರಮೇಶ್ ಜಿಗಜಿಣಗಿ ಅವರು ಬಹುನಿರೀಕ್ಷಿತ ಚಿತ್ರದುರ್ಗ-ಆಲಮಟ್ಟಿ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಪಡೆಯುವ ಭರವಸೆ ವ್ಯಕ್ತಪಡಿಸಿದ್ದಾರೆ.