ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ದಿ ಪಡೆದಿರುವ ಕೊಪ್ಪಳ ನಗರದಲ್ಲಿರುವ ಗವಿಮಠ ರಥೋತ್ಸವಕ್ಕೆ ಬಂದವರು ಯಾರು ಕೂಡಾ ಹಸಿವಿನಿಂದ ಹೋಗಬಾರದು ಅನ್ನೋದು ಗವಿಮಠದ ಪೀಠಾಧಿಪತಿಯಾಗಿರೋ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಆಶಯವಾಗಿದೆ. ಹೀಗಾಗಿ ಜಾತ್ರೆಯ ಸಮಯದಲ್ಲಿ ಭರೋ ಭಕ್ತರಿಗೆ ಭರ್ಜರಿ ಭೂರಿ ಭೋಜನದ ವ್ಯವಸ್ಥೆಯನ್ನು ಮಾಡುತ್ತಾರೆ.
ಒಟ್ಟು 21 ದಿನಗಳ ಕಾಲ ಮಠದಲ್ಲಿ ಮಹಾ ದಾಸೋಹ ನಡೆಯಲಿದ್ದು, ಅದಕ್ಕಾಗಿ ಈಗಾಗಲೇ ಒಂದು ವಾರದಿಂದ ಮಹಾದಾಸೋಹ ಆರಂಭವಾಗಿದ್ದು, ರಥೋತ್ಸವ ದಿನವಾದ ಇಂದು ಭಕ್ತರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿದೆ.
ಇಂದು ರೊಟ್ಟಿ, ಕಾಳು ಪಲ್ಯಾ, ಬದನೆಕಾಯಿ ಪಲ್ಯಾ, ಶೇಂಗಾ ಹೋಳಿಗೆ, ಮಾದಲಿ, ಕಡಬು ತುಪ್ಪ ಸೇರಿದಂತೆ ಅನೇಕ ಸಿಹಿ ತಿನಿಸುಗಳು, ಅನ್ನ ಸಾರನ್ನು ನೀಡಲಾಗುತ್ತಿದೆ. ಪ್ರಸಾದವಾದ್ರು ಕೂಡಾ ಜಾತ್ರೆಗೆ ಬರೋ ಭಕ್ತರಿಗೆ ಭೂರಿ ಭೋಜನದ ವ್ಯವಸ್ಥೆಯನ್ನು ಮಠದಿಂದ ಮಾಡಲಾಗಿದೆ.
ಮಹಾದಾಸೋಹಕ್ಕೆ, ಲಕ್ಷ ಲಕ್ಷ ಶೇಂಗಾ ಹೋಳಿಗೆ, ರೊಟ್ಟಿಯನ್ನು ಸಿದ್ದಗೊಳಿಸಿ ಮಠಕ್ಕೆ ತಂದು ನೀಡಿದ್ದಾರೆ. ಜಾತ್ರೆಗೆ ಒಂದು ತಿಂಗಳು ಇರುವಾಗಲೇ ಭಕ್ತರು ತಮ್ಮ ತಮ್ಮ ಮನೆಯಲ್ಲಿ ತಮ್ಮ ಶಕ್ತ್ಯಾನುಸಾರ ರೊಟ್ಚಿ,ಶೇಂಗಾ ಹೋಳಿಗೆ, ಕಡಬು, ಶೇಂಗಾ ಹಿಂಂಡಿಯನ್ನು ಸಿದ್ದಗೊಳಿಸಿ ಮಠಕ್ಕೆ ತಂದು ನೀಡುತ್ತಾರೆ. ಸಿಂಧನೂರಿನ ಭಕ್ತರ ತಂಡವೊಂದು ಎಂಟು ಲಕ್ಷ ಶೇಗಾ ಹೋಳಿಗೆಯನ್ನು ಸಿದ್ದಗೊಳಿಸಿ ತಂದು ನೀಡಿದ್ದಾರೆ.
ಇನ್ನು ಮಠದಲ್ಲಿ ಪ್ರತಿನಿತ್ಯ ದಾಸೋಹ ವ್ಯವಸ್ಥೆ ಇರುತ್ತದೆ. ಆದ್ರೆ ಜಾತ್ರೆ ಸಮಯದಲ್ಲಿ ಮಹಾ ದಾಸೋಹ ನಡೆಸಲಾಗುತ್ತದೆ. ದಿನದ ಮೂರು ಹೊತ್ತು ಕೂಡಾ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.