ಹೊಸಳ್ಳಿ (ಗಂಗಾವತಿ) : ತಾಲ್ಲೂಕಿನ ಹೊಸಳ್ಳಿ ಗ್ರಾಮದ ಪರಿಶಿಷ್ಟ ಜಾತಿಯವರ ಕಾಲೊನಿಯಲ್ಲಿ ಬುಧವಾರ ಬೆಳಗಿನ ಜಾವ ಸಿಲಿಂಡರ್ ಸ್ಫೋಟಗೊಂಡು ಅಂಗಡಿ ಭಸ್ಮವಾಗಿದೆ.
ಇಲ್ಲಿನ ದುರ್ಗಮ್ಮ ದೇವಿ ದೇವಸ್ಥಾನದ ಬಳಿ ಸೋಮನಾಥ ಎಂಬುವರು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಸ್ವಲ್ಪ ದೂರದಲ್ಲಿ ಮಾಂಸ ಮಾರಾಟ ಅಂಗಡಿ ಇತ್ತು. ಇದರ ಮಾಲೀಕ ಮುಸ್ತಾಫ ಸಿಲಿಂಡರ್ ಅನ್ನು ಸೋಮನಾಥ ಅವರ ಅಂಗಡಿಯಲ್ಲಿ ಇಟ್ಟು ಹೋಗಿದ್ದರು. ಅದು ಏಕಾಏಕಿ ಸ್ಫೋಟಗೊಂಡಿದೆ.
ನಿಂಗಮ್ಮ ಎನ್ನುವವರ ಕೈ ಮತ್ತು ಹೊಟ್ಟೆಗೆ ಗಾಯಗಳಾಗಿವೆ. ಪಂಪನಗೌಡ ಎನ್ನುವವರಿಗೆ ಕಣ್ಣಿಗೆ ಗಾಯವಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಲಿಂಡರ್ ಸ್ಫೋಟದಿಂದ ಕಿರಾಣಿ ಅಂಗಡಿಯಲ್ಲಿನ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಕಂದಾಯ ಅಧಿಕಾರಿಗಳು ಪರಿಶೀಲಿಸಿ, ಅಂದಾಜು ₹80 ರಿಂದ ₹90 ಸಾವಿರ ಹಾನಿಯಾಗಿದೆ ಎಂದು ಅಂದಾಜು ಮಾಡಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಉದಯರವಿ, ಚಿಕ್ಕಜಂತಕಲ್ ಪಿಡಿಒ ಸೈಯದ್ ಜೆ.ಬಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.
ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಸೇರಿದಂತೆ ಪೊಲೀಸ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ, ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರು ಈ ವೇಳೆ ಇದ್ದರು.