ಕಲಬುರಗಿ: ಪ್ರಿಯಾಂಕ ಖರ್ಗೆ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎನ್ನುವ ಭಾಸ್ಕರ್ ರಾವ್ ಹೇಳಿಕೆಗೆ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ. ಕಲ್ಬುರ್ಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, ಭಾಸ್ಕರ ರಾವ್ ನಮ್ಮಲ್ಲೂ ಟಿಕೆಟ್ ಕೇಳಿದ್ರು. ನಂತರ ಆಮ್ ಆದ್ಮಿಗೆ ಹೋದ್ರು. ಈಗ ಬಿಜೆಪಿ ಸೇರಿದ್ದಾರೆ. ಭಾಸ್ಕರ ರಾವ್ ಅವರಿಗೆ ಬಿಜೆಪಿಗೆ ಹೋದ ಮೇಲೆ ಸಂವಿಧಾನ ಮರೆತು ಹೋಗಿದೆ. ಸೀನಿಯರ್ ಐಪಿಎಸ್ ಅಧಿಕಾರಿ ಇದ್ದವರು ಅವರು. ಸಾಮಾನ್ಯ ಪ್ರಜ್ಞೆ ಇಲ್ಲದ ಅಧಿಕಾರಿ ನಮ್ಮಲ್ಲಿ ಇದ್ರಾ ? ಅಂತಾ ಅನ್ನಿಸ್ತಿದೆ ಎಂದು ವ್ಯಂಗ್ಯವಾಡಿದರು.
ಸಾಮಾಜಿಕ ತಾಣದಲ್ಲಿ ಸುಳ್ಳಿನ ಕಂತೆಗಳು ಹರಿದಾಡಬಾರದು ಅಂತ ಕಾನೂನು ತರಲು ಯೋಚಿಸಿದ್ದೇವೆ ಎಂದ ಪ್ರಿಯಾಂಕ ಖರ್ಗೆ, ನಾವೇನು ಮೋದಿ, ಅಮಿತ್ ಶಾ ತರಹ ರಾತ್ರೋ ರಾತ್ರಿ ಕದ್ದು ಮುಚ್ಚಿ ಜಾರಿಗೆ ತರ್ತಿಲ್ಲ. ಇದರಿಂದ ಬಿಜೆಪಿಯವರು ವಾಕ್ ಸ್ವಾತಂತ್ರ್ಯ ಹೋಗುತ್ತೆ ಅಂತಿದಾರೆ. ಸುಳ್ಳು ಸುದ್ದಿಗೆ ಕಡಿವಾಣ ಹಾಕೋದಕ್ಕೆ ಮಾಧ್ಯಮಗಳು ಸ್ವಾಗತ ಮಾಡುತ್ತಿವೆ. ಆದರೆ ಬಿಜೆಪಿಗೆ ಯಾಕೆ ಆತಂಕ ಕಾಡುತ್ತಿದೆ? ಬಿಜೆಪಿಯವರ ಬಳಿ ಸುಳ್ಳಿನ ಸುದ್ದಿಯ ಫ್ಯಾಕ್ಟರಿ ಇದೆಯಾ? ನಾವು ರಾತ್ರೋ ರಾತ್ರಿ ಕಾನೂನುತರ್ತಿಲ್ಲ. ಎಲ್ಲರ ಸಲಹೆ ಸಹ ಕೇಳಿದ್ದೀವಿ. ಬಿಜೆಪಿಯವರಿಗೆ ಯಾಕೆ ಆತಂಕ ಆಗ್ತಿದೆಯೋ? ನಿಮ್ಮವರು ಯಾರಾದ್ರೂ ಜೈಲಿಗೆ ಹೋಗ್ತಾರೆ ಅಂತ ಭಯಾನಾ? ಎಂದು ವ್ಯಂಗ್ಯವಾಡಿದರು.
ಉದ್ಯಮಿ ಗೋವಿಂದ ಪೂಜಾರಿಗೆ ಕೋಟ್ಯಂತರ ರೂಪಾಯಿ ಹಣ ವಂಚಿಸಿದ ಚೈತ್ರಾ ಕುಂದಾಪುರ ಗ್ಯಾಂಗ್ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, ಎಲ್ಲರೂ ಯಾಕೆ ಕುಮಾರ ಕೃಪಾದಿಂದಲೇ ಆಪರೇಟ್ ಆಗಿರೋದು? ಇದೇ ಚೈತ್ರಾ ಕುಂದಾಪುರ ಅರಗಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಅಬ್ಬರದ ಭಾಷಣ ಮಾಡಿದ್ರು. ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿದ್ದರು ಎಂದು ಟೀಕಿಸಿದರು.
ಕೇಂದ್ರಿಯ ವಿವಿಯಲ್ಲಿ ವಿವೇಕಾನಂದರಿಗೆ ಅವಮಾನವಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರಿಯ ವಿವಿ ವಿದ್ಯಾಭ್ಯಾಸ ಬಿಟ್ಟು ಎಲ್ಲಾ ಮಾಡ್ತಿದೆ, ನಾನು ಆದಷ್ಟು ಬೇಗ ಭೇಟಿ ಮಾಡ್ತೇನೆ. ಸೆಂಟ್ರಲ್ ವಿವಿಯಲ್ಲಿ ಕಲಬುರಗಿಗಿಂತ ಹೆಚ್ಚು ರಾಜಕೀಯ ನಡೆದಿದೆ. ವಿವಿಯವರು ಕೇಂದ್ರಕ್ಕೆ ಸಂಬಂಧ ಇದ್ದೀವಿ ಅಂತಾ ಅಂದುಕೊಂಡಿರಬಹುದು. ರಾಜ್ಯ ಸರ್ಕಾರ ಸಾಕಷ್ಟು ಸೌಲಭ್ಯ ಕೊಟ್ಟಿದೆ. ಒಂದು ಸಾರಿ ಹೇಳಿದ್ದೆ, ಆದರೂ ತಿದ್ದುಕೊಂಡಿಲ್ಲ, ಇನ್ನೊಂದು ಸಾರಿ ತಿಳಿ ಹೇಳ್ತೇನೆ. ಸೆಂಟ್ರಲ್ ವಿವಿಯಲ್ಲಿ ಆರ್ ಎಸ್ ಎಸ್ ಕಚೇರಿ ತೆರೆಯೋದಕ್ಕೆ ಬಿಡೋದಿಲ್ಲ. ನಮ್ಮ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡೋದಕ್ಕೆ ವಿವಿ ತರಿಸಿರೋದು ಹೊರತುಆರ್ ಎಸ್ ಎಸ್ ಕಚೇರಿ ಸಲುವಾಗಿ ಅಲ್ಲ ಎಂದು ಕಿಡಿಕಾರಿದರು.
ಇನ್ನು, ಯಾವ್ಯಾವ ಉದ್ದೇಶಗಳಿಗೆ ಸಂಸ್ಥೆ ತೆರದಿದ್ದೇವೆಯೋ ಅದನ್ನ ಪಾಲನೆ ಮಾಡಲಿ ಎಂದ ಸಚಿವ ಪ್ರಿಯಾಂಕ ಖರ್ಗೆ, ಪೊಲೀಸ್ ಠಾಣೆಯಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದಾರೆ. ಶಾಖೆಗಳು ಕಳೆದ ಒಂಭತ್ತು ವರ್ಷಗಳಲ್ಲಿ ಬಹಳಷ್ಟು ತೆರೆದಿದೆ. ಆರೆಸ್ಸೆಸ್ ತತ್ವ ನಂಬಿ ಯಾರು ಉದ್ದಾರ ಆಗಿದ್ದಾರೆ? ಆರ್ ಎಸ್ ಎಸ್ ತತ್ವದ ಬಗ್ಗೆ ಮಾತಾಡೋದಕ್ಕೆ ನಾನೇನು ಹೇದರೋದಿಲ್ಲ. ಆರೆಸ್ಸೆಸ್ ತತ್ವದಿಂದ ದೇಶ ಉದ್ದಾರ ಆಗೋದಿಲ್ಲ. ಆರ್ಥಿಕ ಸಮಾನತೆ ಇಲ್ಲ, ದೇಶಭಕ್ತರಿಗೆ ಇತಿಹಾಸವೇ ಇಲ್ಲ ಎಂದರು.