ಕಲಬುರಗಿ: ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರ ಹಾಗೂ ಖರ್ಗೆ ಪ್ರಭಾವದ ಕಲ್ಯಾಣ ಕರ್ನಾಟಕವನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿಯ ನಾಯಕರು, ಪ್ರಚಾರದ ಕಣಕ್ಕೆ ಧುಮುಕಿದ್ದಾರೆ.
371(ಜೆ) ತಿದ್ದುಪಡಿಗೆ ಹತ್ತು ವರ್ಷ ಹಾಗೂ ರಾಜಕೀಯ ಜೀವನಕ್ಕೆ ಕಾಲಿಟ್ಟು 52 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೀದರ್ನಲ್ಲಿ ಬೃಹತ್ ಅಭಿನಂದನಾ ಸಮಾರಂಭ ನಡೆಯಿತು.ಅದರ ಮರುದಿನವೇ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಲಬುರಗಿ ಮತ್ತು ಬೀದರ್ನಲ್ಲಿ ಪ್ರವಾಸ ಮಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಚೌಹಾಣ್ ಅವರು ಸೇಡಂನಲ್ಲಿ ಬುಧವಾರ ‘2024ಕ್ಕೆ ಮತ್ತೊಮ್ಮೆ ಮೋದಿ’ ಎಂಬ ಚುನಾವಣಾ ಪ್ರಚಾರದ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದರು. ನಗರದಲ್ಲಿಯೂ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ, ದೇವರ ದರ್ಶನ ಪಡೆದರು. ಜಿಲ್ಲೆಯಲ್ಲಿ ಲಿಂಗಾಯತರ ಪ್ರಾಬಲ್ಯದ ನಡುವೆಯೂ ಬಂಜಾರ ಸಮುದಾಯದ ಮತಗಳೂ ಬಹು ಸಂಖ್ಯೆಯಲ್ಲಿವೆ. ಹೀಗಾಗಿ, ಎರಡೂ ಸಮುದಾಯಗಳ ಬುಟ್ಟಿಗೆ ಕೈಹಾಕಿ ಮತಫಸಲು ತೆಗೆಯಲು ಬಿಜೆಪಿಯ ನಾಯಕರು ಪ್ರಚಾರದ ಆರಂಭಿಕ ಹೆಜ್ಜೆ ಇರಿಸಿದ್ದಾರೆ.
‘ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆಗಿಳಿದರೆ ಅವರಿಗೆ ವಯಸ್ಸಾಗಿದೆ. ಹೀಗಾಗಿ, ಮತ್ತೊಮ್ಮೆ ಅತ್ಯಧಿಕ ಮತಗಳಿಂದ ಸೋಲಿಸಿ ಚುನಾವಣಾ ಅಖಾಡದಿಂದ ಶಾಶ್ವತವಾಗಿ ವಿಶ್ರಾಂತಿ ನೀಡಿ’ ಎಂದ ಚೌಹಾಣ್, ತಾವು ಬಂದಿದ್ದರ ಸಂದೇಶವನ್ನು ಸೇಡಂನಲ್ಲಿ ಕಾರ್ಯಕರ್ತರಿಗೆ ರವಾನಿಸಿದರು. ಖರ್ಗೆ ಅವರು ತಾವು ವಹಿಸಿಕೊಂಡ ಜವಾಬ್ದಾರಿಯನ್ನು ನಿಷ್ಠೆ ಮತ್ತು ನಿಷ್ಠುರತೆಯಿಂದ ಸಮರ್ಥವಾಗಿ ನಿಭಾಯಿಸುವ ಕಾರ್ಯಶೈಲಿಗೆ ವಿರೋಧ ಪಕ್ಷದವರೂ ತಲೆದೂಗಿದ್ದು ಸಾಕಷ್ಟು ನಿದರ್ಶನಗಳಿವೆ. ಈ ಬಗ್ಗೆ ಅರಿತಿರುವ ನಾಲ್ಕು ಬಾರಿಯ ಸಿಎಂ ಚೌಹಾಣ್ ಅವರು, ‘ವಯಸ್ಸಾದರೂ ಖರ್ಗೆ ಅವರು ಮಹಾಘಟಬಂಧನ್ ಕಟ್ಟಿಕೊಂಡು ಮೋದಿಯವರನ್ನು ಕಟ್ಟಿಹಾಕಲು ಯತ್ನಿಸುತ್ತಿದ್ದಾರೆ’ ಎನ್ನುವ ಮೂಲಕ ಖರ್ಗೆ ಅವರ ಶಕ್ತಿ ಬಗ್ಗೆಯೂ ಕಾರ್ಯಕರ್ತರಿಗೆ ಎಚ್ಚರಿಸಿದ್ದಾರೆ.
‘ಪಕ್ಷದ ಒಳಗೆ ಖರ್ಗೆ ಅವರು ಖಡಕ್ ಮಾತಾಡುತ್ತಿದ್ದರೆ ಒಬ್ಬೊಬ್ಬರೇ ನಾಯಕರು ಪಕ್ಷದಿಂದ ಹೊರ ಬರುತ್ತಿದ್ದಾರೆ. ಮತ್ತೊಂದು ಕಡೆ ನಾಯಕ ರಾಹುಲ್ ಗಾಂಧಿ ಅವರು ಪಕ್ಷ ಬಿಟ್ಟು ದೇಶದಲ್ಲಿ ಓಡಾಡುತ್ತಿದ್ದಾರೆ. ಇದರಿಂದಾಗಿ ಖರ್ಗೆ ಚಿಂತಾಕ್ರಾಂತರಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಥೆ ಮುಗಿಯಲಿದೆ’ ಎಂದು ಕಾಂಗ್ರೆಸ್ ಕಾರ್ಯಕರ್ತರ ಆತ್ಮ ವಿಶ್ವಾಸ ಕುಗ್ಗಿಸುವ ಮಾತುಗಳನ್ನು ನಗರದಲ್ಲಿ ಆಡಿದರು.
‘ಕಾಂಗ್ರೆಸ್ ಪಕ್ಷ ಸೋನಿಯಾ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಅವರ ಹಿಡಿತದಲ್ಲಿದೆ. ಖರ್ಗೆ ಅವರು ಪಕ್ಷದ ಅಧ್ಯಕ್ಷರಾಗಿದ್ದರೆ, ಇಲ್ಲಿ ಅವರ ಮಗ ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದಾರೆ. ಸರ್ವಾಧಿಕಾರ, ಪರಿವಾರವಾದ ಕಾಂಗ್ರೆಸ್ನಲ್ಲಿದೆ’ ಎಂದು ಕುಟುಂಬ ರಾಜಕಾರಣದ ಬಗ್ಗೆಯೂ ಪ್ರಸ್ತಾಪಿಸಿದರು.