ಕಲಬುರಗಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿ ತರಗತಿಗಳನ್ನು ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಮಾಧ್ಯಮ ಪ್ರತಿನಿಧಿ ಶರಣಬಸಪ್ಪ ಮೈಸಲಗಿ, ‘ಸುಮಾರು 15 ವರ್ಷಗಳಿಂದ ನಾವು ಅತಿಥಿ ಉಪನ್ಯಾಸಕರಾಗಿಯೇ ಸೇವೆ ಸಲ್ಲಿಸುತ್ತಿದ್ದೇವೆ.
ಜಿಲ್ಲೆಯಲ್ಲಿ ಸುಮಾರು 350 ಅತಿಥಿ ಉಪನ್ಯಾಸಕರಿದ್ದೇವೆ. ರಾಜ್ಯದಾದ್ಯಂತ 11 ಸಾವಿರ ಇದ್ದೇವೆ. ನಮಗೆ ಕನಿಷ್ಠ ಸೇವಾ ಭದ್ರತೆಯೂ ಇಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮುಂದುವರಿಯಲಿದೆ’ ಎಂದು ಮಾಹಿತಿ ನೀಡಿದರು.
ಅತಿಥಿ ಉಪನ್ಯಾಸಕಿ ನಾಗವೇಣಿ ಹಿರೇಮಠ ಮಾತನಾಡಿ, ‘ಕೆಟಗರಿ ಆಧಾರದಲ್ಲಿ ಎಂ.ಎ ಮುಗಿದವರಿಗೆ ₹ 26 ಸಾವಿರ, ಎಂ.ಫಿಲ್ ಮುಗಿದವರಿಗೆ ₹ 28, ಪಿಎಚ್.ಡಿ ಮುಗಿದವರಿಗೆ ₹ 30 ಸಾವಿರ ಎಂದು ಸಂಬಳ ನಿಗದಿ ಮಾಡಿದ್ದಾರೆ. ಆದರೆ ತರಗತಿಗಳನ್ನು ಹೆಚ್ಚಿಸಿದ್ದಾರೆ. ಅಕ್ಟೋಬರ್ ತಿಂಗಳಿನಿಂದ ಸಂಬಳವಾಗಿಲ್ಲ, ನಮಗೂ ಆರೋಗ್ಯ ಸಮಸ್ಯೆಗಳು ಇವೆ. ನಮ್ಮ ಎಲ್ಲಾ ಸಮಸ್ಯೆಗಳಿಗೆ ಸೇವೆ ಕಾಯಮಾತಿಯೇ ಪರಿಹಾರ’ ಎಂದು ಹೇಳಿದರು.