ಕಲಬುರಗಿ: ಯಾದಗಿರಿ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆ ಒಬ್ಬ ವ್ಯಾಪಾರಿ ಹಾಗೂ ಗ್ರಾಮಪಂಚಾಯತ್ ಮಟ್ಟದಿಂದ ಬೆಳೆದ ಸಾಮಾನ್ಯ ಕಾರ್ಯಕರ್ತನ ನಡುವೆ ನಡೆದಿದೆ ಎನ್ನುವ ಕಾರಣಕ್ಕೆ ರಾಜ್ಯದ ಗಮನ ಸೆಳೆದಿದೆ. ನೀವು ಕೆಲಸ ಮಾಡುವ ಸಾಮಾನ್ಯ ಕಾರ್ಯಕರ್ತ ಶಿವಾನಂದ ಪಾಟೀಲ್ ಅವರನ್ನ ಗೆಲ್ಲಿಸಿ ವ್ಯಾಪಾರಿಯನ್ನು ಸೋಲಿಸಿ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಶಹಾಪುರ ಪಟ್ಟಣದ ಆರಬೋಳ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಕಲಬುರಗಿ-ಯಾದಗಿರಿ ವಿಧಾನಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಅವರ ನಡುವೆ ಮಾಧ್ಯಮದವರ ಸಮ್ಮುಖದಲ್ಲಿ ಬಹಿರಂಗ ಚರ್ಚೆ ನಡೆಯಲಿ ಅಭಿವೃದ್ದಿ ಪರ ಯಾರಿದ್ದಾರೆ ಎಂದು ಎಲ್ಲರಿಗೂ ಗೊತ್ತಾಗಲಿ. ಬಿ.ಜಿ.ಪಾಟೀಲರಿಗೆ ಪಂಚಾಯತರಾಜ್ ಬಗ್ಗೆ ಯಾವ ಮಾಹಿತಿ ಇಲ್ಲ. ಹೋಗಲಿ ಪಿ.ಡಿ.ಓ, ತಾಪಂ ಇಓ ಅವರ ಕಾರ್ಯವೈಖರಿ ಬಗ್ಗೆ ಹೇಳಲಿ ನೋಡೋಣ ಆಗ ಜನರೇ ತೀರ್ಮಾನಿಸಲಿ ಎಂದು ಸವಾಲಾಕಿದರು.
ಗ್ರಾಮಗಳ ಅಭಿವೃದ್ದಿಯಾಗಬೇಕೆಂದು ಅಂದಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಗ್ರಾಮ ಪಂಚಾಯತ್ಗೆ ಬಲ ತುಂಬಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲ ಜನಪರ ಯೋಜನೆಗಳ ಮೂಲಕ ಸಮಾಜದ ಎಲ್ಲ ವರ್ಗಗಳ ಅಭಿವೃದ್ದಿಗೆ ಶ್ರಮಿಸಿದೆ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಯೋಜನೆಗಳಿಗೆ ತೀಲಾಂಜಲಿ ನೀಡಿದೆ. ಹಸಿರು ಶಾಲು ಹಾಕಿಕೊಂಡು ಅಧಿಕಾರಕ್ಕೆ ಬಂದ ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಿ ಎಂದರೆ ತಮ್ಮ ಬಳಿ ನೋಟು ಪ್ರಿಂಟ್ ಮಾಡುವ ಮಷೀನ್ ಇಲ್ಲ ಎಂದರು ಇದು ಜನಪರ ಆಡಳಿತನಾ? ಎಂದ ಪ್ರಶ್ನಿಸಿದರು.
ಗ್ರಾಮೀಣ ಅಭಿವೃದ್ದಿಗಾಗಿ ನರೇಗಾ ಯೋಜನೆಗಳ ಸಮರ್ಪಕ ಜಾರಿಗೆ ಈ ಸರ್ಕಾರಕ್ಕೆ ಮನಸಿಲ್ಲ. ಆದರೆ ಭ್ರಷ್ಟಾಚಾರ ಮಾತ್ರ ವ್ಯಾಪಕವಾಗಿ ಹಬ್ಬುವಂತೆ ನೋಡಿಕೊಂಡಿದೆ ಇದರಿಂದಾಗಿ ಬಿಜೆಪಿ ಎಂದರೆ ಭ್ರಷ್ಟ ಜನತಾ ಪಾರ್ಟಿ ಎನ್ನುವಂತಾಗಿದೆ. ಇದರ ವಿರುದ್ದ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದು ತಮ್ಮ ಇಲಾಖೆಯಲ್ಲಿ ತಮಗೆ ತಿಳಿಯದಂತೆ ಟೆಂಡರ್ ನಡೆಯುತ್ತಿದೆ ಭ್ರಷ್ಟಾಚಾರ ನಡೆದಿದೆ ವಿವರಿಸಿದ್ದರು ಎಂದರು.