ಬೀದರ್: ಕಳೆದ 9 ವರ್ಷಗಳಲ್ಲಿ ಸುಮಾರು 180 ದೇಶಗಳು ಭಾರತದ ಯೋಗ ಪದ್ದತಿಯನ್ನು ಅಳವಡಿಸಿಕೊಂಡಿದ್ದು ವಿಶ್ವ ಶಾಂತಿಗಾಗಿ ಯೋಗ ಅಗತ್ಯವಾಗಿದೆ ಎಂದು ನವೀಕರಿಸಬಹುದಾರ ಇಂಧನ ಮೂಲ ಹಾಗೂ ರಾಸಾಯನಿಕ ರಸಗೊಬ್ಬರ ಖಾತೆ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಅವರು ಬುಧವಾರ ಜಿಲ್ಲಾಡಳಿತ ಬೀದರ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ ಇಲಾಖೆ ಹಾಗೂ ವಿವಿಧ ಯೋಗ ಸಂಘ -ಸಂಸ್ಥೆಗಳ ಸಂಯುಕ್ತಾಶ್ರದಲ್ಲಿ ಬೀದರ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಯೋಗ ಫಾರ್ ವಸುದೈವ ಕುಟುಂಬಕA” ಧ್ಯೇಯದೊಂದಿಗೆ ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಶ್ವ ಸಂಸ್ಥೆಯ ಅಂಗಳದಲ್ಲಿ ಆಚರಿಸುತ್ತಿರುವುದು ಭಾರತದ ಪಾಲಿಗೆ ಸಂತಸದ ಸಂಗತಿಯಾಗಿದೆ. ಉತ್ತಮ ಆಹಾರ ಸೇವನೆಯ ಜೊತೆಗೆ ಯೋಗ ಮಾಡುವುದರಿಂದ ಜೀವನದುದ್ದಕ್ಕು ಆರೋಗ್ಯವಂತಾಗಿರಲು ಸಾಧ್ಯವಿದೆ. ಆದರಿಂದ ಜಾತಿ, ಧರ್ಮ, ಪಂಥ ಎನ್ನದೆ ಎಲ್ಲರೂ ದಿನನಿತ್ಯ ಯೋಗ ಮಾಡಬೇಕೆಂದರು.
ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ ಖಾನ ಮಾತನಾಡಿ, ಯೋಗ ಮಾಡುವದರಿಂದ ಮಾನಸಿಕ ಒತ್ತಡ ಶಮನವಾಗಿ ದಿನದ 24 ಗಂಟೆಯು ನಾವು ಉತ್ಸಾಹದಿಂದಿರಲು ಸಾಧ್ಯ, ಜೊತೆಗೆ ಯೋಗವು ಉತ್ತಮ ಆರೋಗ್ಯಕು ಸಹಕಾರಿಯಾಗಲಿದೆ ಎಂದು ಹೇಳಿದರು.
ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಹೆಚ್ಚಿನ ಮಾನ್ಯತೆ ಸಿಕ್ಕಿದೆ, ಜೊತೆಗೆ ವಿಶ್ವದ ಎಲ್ಲಾ ದೇಶಗಳು ಭಾರತದತ್ತ ತಿರುಗಿ ನೋಡುವಂತಾಗಿದೆ.
ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಇನ್ನು ಹೆಚ್ಚಿನ ಮಾನ್ಯತೆ ಸಿಗಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಆಯುಷ ಇಲಾಖೆಯ ಯೋಗ ಪಟು ಆನಂದ ಅವರ ನೇತೃತ್ವದಲ್ಲಿ ಯೋಗ ಪ್ರದರ್ಶನ ನಡೆಯಿತು. ಅವರು ಯೋಗದ ವಿವಿಧ ಪ್ರಕಾರಗಳನ್ನು ಹೇಳಿಕೊಟ್ಟರು ವಿವಿಧ ಶಾಲಾ ಕಾಲೇಜಿನ ಮಕ್ಕಳು ಸೇರಿದಂತೆ ಹಲವಾರು ಜನರು ಈ ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.
ಈ ಯೋಗ ಪ್ರದರ್ಶನದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ ಖಾನ, ಬೀದರ ದಕ್ಷಿಣ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೀಲ್ಪಾ.ಎಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಜಿಲ್ಲಾ ಆಯುಷ ಅಧಿಕಾರಿ ಡಾ. ರಾಜಕುಮಾರ ಬಿ. ಪಾಟೀಲ್, ಗುರುನಾಥ್ ಕೊಳ್ಳುರ್ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.