ಬೀದರ್: ಆ ಜಿಲ್ಲೆಯಲ್ಲಿ ಸರಕಾರಿ ಶಾಲೆ ಗಳೆಂದರೆ ಮೂಗು ಮುರಿಯುವ ಜನರೇ ಜಾಸ್ತಿ. ಆದರೆ ಆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಇತರ ಶಾಲೆಗಳಿಗೆ ಮಾದರಿಯಾಗುವಂತಿದೆ.
ಹಸಿರು ವಾತಾವರಣ, ನಲಿಕಲಿ ಪ್ರಶಂಸೆ ಪ್ರಶಸ್ತಿ, ಹಸಿರು ಶಾಲೆಯೆಂಬ ಕೀರ್ತಿಗೆ ಪಾತ್ರವಾಗುವ ಮೂಲಕ ಶಹಬ್ಬಾಷ್ ಎನ್ನುವಂತಿದೆ. ಪ್ರಶಸ್ತಿ ಪುರಸ್ಕಾರಗಳು ನಮ್ಮನ್ನ ಹುಡುಕಿಕೊಂಡು ಬರಬೇಕೆ ಹೊರತು ನಾವು ಪ್ರಶಸ್ತಿಗಳನ್ನ ಹುಡುಕಿಕೊಂಡು ಹೋಗುವುದು ಆತ್ಮಸಾಕ್ಷಿಗೆ ವಿರುದ್ಧವಾಗುತ್ತದೆ. ಹೀಗಾಗಿ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನಲ್ಲಿಯೇ ಕಪ್ಪರಗಾಂವ ಪ್ರಾಥಮಿಕ ಶಾಲೆಗೆ ಒಂದು ಹೆಸರಿದೆ.
ಈ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ನಲಿ-ಕಲಿ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ರಾಜ್ಯ ಮಟ್ಟದ ನಲಿ ಕಲಿ ಪ್ರಶಸ್ತಿ ಬಾಚಿಕೊಂಡಿದ್ದು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.
ಉತ್ತಮ ಪರಿಸರ ಪ್ರಜ್ಞೆ ಮೂಡಿಸಲು ನೂರಾರು ವಿವಿಧ ತರಹದ ಸಸಿಗಳನ್ನು ನೆಡಲಾಗಿದೆ. ಶಾಲೆಯಲ್ಲಿ ಪ್ರಸಕ್ತ 53 ಮಕ್ಕಳು ಓದುತ್ತಿದ್ದು, ಶೇ.100 ಹಾಜರಿ ಇದೆ. ಇಲ್ಲಿ ಗಿಡ, ಮರಗಳನ್ನು ಮಕ್ಕಳಂತೆ ಆರೈಕೆ ಮಾಡಲಾಗುತ್ತಿದ್ದು, ಆ ಗಿಡಗಳ ಬುಡದಲ್ಲೇ ಮಕ್ಕಳು ಓದಿಕೊಳ್ಳುವುದು, ಬಿಸಿಯೂಟ ಸವಿಯುತ್ತಾರೆ. ಇನ್ನು ಮಕ್ಕಳ ಆಟವು ಹಸಿರು ಗಿಡದ ನೆರಳಿನಲ್ಲಿಯೇ ನಡೆಯುವುದರಿಂದ ಮಕ್ಕಳ ಉತ್ಸಾಹಕ್ಕೆ ಪ್ರೋತ್ಸಾಹ ಸಿಗುವಂತಿದೆ. ಮಕ್ಕಳು ಮನೆಯಲ್ಲಿ ಕೊಟ್ಟ ಚಿಲ್ಲರೆ ಕಾಸುಗಳನ್ನು ಬ್ಯಾಂಕ್ ರೀತಿ ಲೆಕ್ಕವಿಟ್ಟು ಅಗತ್ಯ ವಸ್ತುಗಳನ್ನು ಪಡೆಯುತ್ತಿದ್ದಾರೆ.
ಶಾಲೆಯ ವಾತಾವರಣ ಮಕ್ಕಳಿಗೆ ಸಾಕಷ್ಟು ಖುಷಿಯನ್ನ ಕೊಡುತ್ತಿದೆ. ಇದರ ಜೊತೆಗೆ ಹಲವಾರು ಗಿಡಗಳನ್ನು ಬೆಳೆಸಲಾಗಿದ್ದು, ಅವುಗಳ ಆರೈಕೆಯನ್ನು ಮಕ್ಕಳೇ ವಹಿಸಿಕೊಂಡು ಬೆಳೆಸುತ್ತಿದ್ದಾರೆ. ಶಾಲಾ ಆವರಣದ ತುಂಬೆಲ್ಲಾ ಹೊಂಗೆ ಮರ, ಪೇರಲ, ನೇರಳೆ ಸೇರಿದಂತೆ ನಾನಾ ನಮೂನೆಯ ಜೌಷಧೀಯ ಸಸ್ಯಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಗಿಡಳಿವೆ.
ಶಾಲಾ ಆವರಣವನ್ನು ಕಂಡರೆ ಸರಕಾರಿ ಶಾಲೆಗಳು ಹೀಗೂ ಇರಬಹುದಾ? ಎಂದು ಅಚ್ಚರಿ ಮೂಡಿಸುವಂತಿದೆ. ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಲು, ಅವರಿಗೆ ಪರಿಸರದ ಬಗ್ಗೆ ಕಾಳಜಿ, ಆಸಕ್ತಿ ಮೂಡುವಂತೆ ಮಾಡುವ ಉದ್ದೇಶದಿಂದ ಹಾಗೂ ಶಾಲೆಯ ಆವರಣವನ್ನು ಉತ್ತಮ ಪರಿಸರವನ್ನಾಗಿ ಮಾಡಲು ಶಾಲೆಯ ಶಿಕ್ಷಕ ವರ್ಗದವರು ವಿದ್ಯಾರ್ಥಿಗಳೊಂದಿಗೆ ಸಸಿ ನೆಟ್ಟು ಗಿಡ ಬೆಳಿಸಿದ್ದಾರೆ. ಇದರಿಂದ ಮಕ್ಕಳು ಕೌಟುಂಬಿಕ ವಾತಾವರಣದಲ್ಲಿ ಕಲಿಯುವಂತಾಗಿದ್ದು, ಪೋಷಕರು ಸಂತೋಷದಿಂದ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ ಅಂತಾರೆ ಶಿಕ್ಷಕರು.