ಬೀದರ್: ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ನಮ್ಮ ಸರ್ಕಾರ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ ಹೇಳಿದರು.
ಅವರು ಶುಕ್ರವಾರ ಬೀದರ ಕೇಂದ್ರ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಪ್ರಚಾರದ ಸಂಚಾರಿ ವಾಹನಕ್ಮೆ ಹಸಿರು ನಿಶಾನೆ ತೋರಿ ಮಾತನಾಡಿದರು.
ಗೃಹ ಜ್ಯೋತಿ. ಗೃಹ ಲಕ್ಷಿ. ಮತ್ತು ಶಕ್ತಿ ಯೋಜನೆಗಳಿಂದ ವಿಶೇಷವಾಗಿ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ರಾಜ್ಯದಲ್ಲಿ ಯಾರು ಹಸಿವಿನಿಂದ ಬಳಲಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿಮಾಡಲಾಗಿದೆ ಹಾಗೂ ಪದವಿ ಮತ್ತು ಡಿಪ್ಲೋಮಾ ಮುಗಿಸಿ ಉದ್ಯೋಗ ಸಿಗದ ನಿರುದ್ಯೋಗ ಪದವಿಧರ ಯುವಕ ಮತ್ತು ಯುವತಿಯರಿಗೆ ನಿರುದ್ಯೋಗ ಭತ್ಯಯನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದರು.
ಸಾರ್ವಜನಿಕರು ಸರ್ಕಾರದ ಎಲ್ಲಾ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಈ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಸಲುವಾಗಿ ಪ್ರಚಾರ ವಾಹನ ಮತ್ತು ಕಲಾ ತಂಡಗಳ ಮೂಲಕ ಗ್ರಾಮೀಣ ಜನರಿಗೆ ಈ ಯೋಜನೆಗಳ ಮಾಹಿತಿಯನ್ನು ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂಚಾರಿ ವಾಹನ ಬೀದರ ಜಿಲ್ಲೆಯಲ್ಲಿ ಸರ್ಕಾರದ 5 ಯೋಜನೆಗಳಾದ ಶಕ್ತಿ. ಗೃಹಜ್ಯೋತಿ. ಅನ್ನಭಾಗ್ಯ. ಗೃಹ ಲಕ್ಷ್ಮಿ. ಯುವ ನಿಧಿ ಯೋಜನೆಗಳ ಕುರಿತು ಪ್ರಚಾರ ನೀಡಲಿದೆ ಇದರ ಜೊತೆಗೆ ಒಂದು ಕಲಾ ತಂಡವು ಇರಲಿದ್ದು ಈ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಬೀದರ ನಗರ ಸಭೆ ಅಧ್ಯಕ್ಷರಾದ ಮೊಹ್ಮದ ಗೌಸ್, ಮುಖಂಡರಾದ ಬಬಲು ಪಾಲ, ಮಾಹಾಲಿಂಗ, ವಾರ್ತಾ ಇಲಾಖೆಯ ವಿಜಯಕೃಷ್ಣ ಸೋಲಪುರ, ಕಲಾವಿದರಾದ ಶಂಕರ ಚೋಂಡಿ ಮತ್ತು ತಂಡ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.