ಬೀದರ್, ಮೇ.8: ಬೀದರ್ ತಾಲೂಕಿನ ಮಾಳೆಗಾಂವ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಮಾತನಾಡಿ, ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ವಿಧಾನಸಭೆಯಲ್ಲಿ ಹಿಂದೂ ಪರ ಹೋರಾಡಲು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಈಶ್ವರಸಿಂಗ್ ಠಾಕೂರ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿ ಕೆ.ಎಸ್.ಈಶ್ವರಪ್ಪರವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋ ಹತ್ಯೆ ನಿಷೇಧ, ಲವ್ ಜಿಹಾದ್ ವಿರೋಧಿ ಕಾನೂನನ್ನು ತಂದು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಪಿ.ಎಫ್.ಐ. ಸಂಘಟನೆಯನ್ನು ನಿಷೇಧಿಸಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಹಿಂದೂ ಪರ ಕಾನೂನುವನ್ನು ವಾಪಸ್ ಪಡೆಯಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳುತ್ತಿದ್ದಾರೆ ಹಾಗೂ ಕಾಂಗ್ರೆಸ್ ತಮ್ಮ ಘೋಷಣಾ ಪತ್ರದಲ್ಲಿ ಬಜರಂಗ ದಳವನ್ನು ನಿಷೇಧಿಸಲಾಗುವುದು ಎಂದು ಹೇಳಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ಶಾಮಿಲಾದ ಸಂಘಟನೆಗಳ ಸಮರ್ಥನೆ ಮಾಡುತ್ತಿದೆ. ಬೀದರ್ ವಿಧಾನಸಭೆ ಕ್ಷೇತ್ರದ ಭಾಜಪಾ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ ಹಿಂದೂ ಪರ ಕಾಳಜಿ ಇದ್ದಂತಹ ಅಭ್ಯರ್ಥಿ ಹಾಗೂ ಒಳ್ಳೆ ವಕ್ತಾರರಾಗಿದ್ದಾರೆ. ಇಂತಹ ವ್ಯಕ್ತಿಯನ್ನು ವಿಧಾನಸಭೆಯಲ್ಲಿ ಹಿಂದೂ ಪರ ಹೋರಾಡಲು ಭಾರೀ ಬಹುಮತದಿಂದ ತಾವು ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಭಾಜಪಾ ಅಭ್ಯರ್ಥಿ ಈಶ್ವರಸಿಂಗ ಠಾಕೂರ ಅವರು ಮಾತನಾಡಿ ನಾನು ಒಬ್ಬ ಸಾಮಾನ್ಯ ಪರಿವಾರದಿಂದ ಬಂದ ವ್ಯಕ್ತಿ ಕಳೆದ 30 ವರ್ಷದಿಂದ ಹಿಂದೂ ಪರ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ. ಈಗ ಪಕ್ಷ ನನಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ತಾವೆಲ್ಲರೂ ನನಗೆ ಮತವನ್ನು ನೀಡಿ ವಿಧಾನಸಭೆಯಲ್ಲಿ ಹಿಂದೂ ಪರ ಧ್ವನಿ ಎತ್ತಲು ಹಾಗೂ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ 24 ಗಂಟೆಗಳ ಜನರ ಸೇವೆಗಾಗಿ ಲಭ್ಯವಿರುವ ನನಗೆ ಮತವನ್ನು ನೀಡಿ ವಿಜಯಶಾಲಿ ಮಾಡಿ ಎಂದು ಕೋರಿದರು.
ಈ ಸಮಾರಂಭದಲ್ಲಿ ಭಾರತೀಯ ಜನತಾ ಪಾರ್ಟೀಯ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ, ಉಪಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಗಾದಗಿ, ಪೀರಪ್ಪ ಯರನಳ್ಳಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಗಾದಗಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಾಬುರಾವ ಮಲ್ಕಾಪೂರೆ, ಬೀದರ್ ವಿಧಾನಸಭಾ ಕ್ಷೇತ್ರದ ಇನ್ಚಾರ್ಜ್ ಸೋಮನಾಥ ಪಾಟೀಲ, ಮಹೇಶ ಪಾಲಂ, ರಾಜಕುಮಾರ ಪಾಟೀಲ ನೆಮತಾಬಾದ, ದೀಪಕ ಗಾದಗಿ, ಸೂರಜ್ ಸಿಂಗ್ ರಾಜಪೂತ್, ಸೇರಿದಂತೆ ಹಲವಾರು ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.