ಔರಾದ್: ತಾಲ್ಲೂಕಿನ ಜೀರ್ಗಾ(ಕೆ) ಗ್ರಾಮದ ಮೂವರು ವಿಶೇಷ ಚೇತನರಿರುವ ಪರಿಶಿಷ್ಟ ಜಾತಿ ಕುಟುಂಬವೊಂದು ತೀರಾ ಸಂಕಷ್ಟದಲ್ಲಿದೆ.
ಈ ಕುಟುಂಬದ ಮುಖ್ಯಸ್ಥ ಹಣಮಂತ ಮೃತಪಟ್ಟಿದ್ದಾರೆ. ಅವರ ಪತ್ನಿ ಗಂಗಮ್ಮಗೆ ವಯಸ್ಸಾಗಿದೆ. ದುಡಿಯಲು ಆಗುತ್ತಿಲ್ಲ. ಇವರಿಗಿರುವ ನಾಲ್ವರು ಮಕ್ಕಳಲ್ಲಿ ಮೂವರು ಹುಟ್ಟು ವಿಶೇಷ ಚೇತನರು.
ಶಾಂತಮ್ಮ ಹಣಮಂತ (40) ಜ್ಯೋತಿ ಹಣಮಂತ (26) ಹಾಗೂ ಲಕ್ಷ್ಮಣ ಹಣಮಂತ (35) ಎಂಬುವರು ಪೂರ್ಣ ಪ್ರಮಾಣದ ಅಂಗವಿಕಲರು. ಇವರ ಎತ್ತರ ಎರಡರಿಂದ ಎರಡೂವರೆ ಅಡಿ ಮಾತ್ರ. ಕೈ ಹಾಗೂ ಕಾಲಿನ ಬೆರಳುಗಳು ಬಹಳ ಚಿಕ್ಕದಿವೆ. ದುಡಿದು ತಿನ್ನುವುದು ದೂರದ ಮಾತು. ತಮ್ಮ ಶರೀರ ತಮಗೆ ಭಾರವಾಗಿದೆ. ಮನೆಯಲ್ಲೇ ಓಡಾಡಲು ಕಷ್ಟ. ಶೌಚಾಲಯಕ್ಕೂ ಮತ್ತೊಬ್ಬರ ಸಹಾಯ ಬೇಕಾಗುತ್ತದೆ. ಮನೆಯಲ್ಲಿ ದುಡಿಯುವರಿಲ್ಲದೆ ಎರಡು ಹೊತ್ತು ಊಟ ಹಾಗೂ ಔಷಧಿಗಾಗಿ ಪರದಾಡಬೇಕಿದೆ.
ನಮ್ಮ ಮೂವರು ಸಹೋದರರಿಗೆ ಬರುವ ಅಲ್ಪ ಮಾಸಾಶನ, ಪಡಿತರ ಅಕ್ಕಿಯೇ ಬದುಕಿಗೆ ಮೂಲ ಆಧಾರ. ಅದನ್ನು ಬಿಟ್ಟು ನಮಗೆ ಬೇರೆ ಯಾವುದೇ ಸಹಾಯ ಇಲ್ಲ. 40 ವರ್ಷಗಳಿಂದ ಇದೇ ಶೆಡ್ನಲ್ಲಿ ಇದ್ದೇವೆ. ಶೌಚಾಲಯಕ್ಕೂ ಹೊರಗೆ ಹೋಗಬೇಕಿದೆ ಎಂದು ಈ ವಿಶೇಷ ಚೇತನ ಸಹೋದರರ ಪೈಕಿ ಹಿರಿಯವರಾದ ಶಾಂತಮ್ಮ ಹೇಳುತ್ತಾರೆ.
ಮಳೆ, ಗಾಳಿಯಲ್ಲಿ ಈ ಶೆಡ್ನಲ್ಲಿ ವಾಸಿಸಲು ಭಯವಾಗುತ್ತದೆ. ಒಂದು ಮನೆ ಕಟ್ಟಿಸಿಕೊಡಿ ಎಂದು ಊರಿಗೆ ಬಂದವರಲ್ಲಿ ಸಾಕಷ್ಟು ಸಲ ಕೇಳಿದರೂ ಪ್ರಯೋಜನವಾಗಿಲ್ಲ. ಅಂಗವಿಕಲ ಮಾಸಾಶನ ಹೆಚ್ಚಿಸಲು ನಮ್ಮ ಪರವಾಗಿ ಕೇಳುವವರು ಯಾರೂ ಇಲ್ಲ. ಹೀಗಾಗಿ ಇರುವುದರಲ್ಲೇ ಹೇಗೋ ಜೀವನ ಮಾಡುತ್ತಿದ್ದೇವೆ. ನಮ್ಮಂಥವರಿಗೆ ದೇವರು ಹುಟ್ಟಿಸಬಾರದಿತ್ತು ಎಂದು ಅವರು ಕಣ್ಣೀರು ಹಾಕಿದರು.