ಬೀದರ್: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ನವ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಲಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಬಜೆಟ್ನಲ್ಲಿ ಏಳು ಆದ್ಯತೆಗಳು ಇವೆ. ಅವು 130 ಕೋಟಿ ಭಾರತೀಯರ ಜೀವನವನ್ನು ಉತ್ತಮ ಹಾಗೂ ಸಂತೋಷದಾಯಕವಾಗಿಸಲಿವೆ ಎಂದು ಹೇಳಿದ್ದಾರೆ.
ದೇಶದ ಅಭಿವೃದ್ಧಿಗೆ ಯಾವ ಯಾವ ಅಂಶಗಳು ಪೂರಕವೋ ಅವೆಲ್ಲಕ್ಕೂ ಪ್ರಾಮುಖ್ಯ ಕೊಡಲಾಗಿದೆ. ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ದೇಶ ಅಮೃತ ಮಹೋತ್ಸವ ಸಂಭ್ರಮದ ಕಾಲಘಟ್ಟದಲ್ಲಿದೆ. ಶತಮಾನೋತ್ಸವದತ್ತ ಸದೃಢವಾಗಿ ಒಯ್ಯುವ ದಿಸೆಯಲ್ಲಿ ಬಜೆಟ್ ನೀಲನಕ್ಷೆಯಂತಿದೆ ಎಂದು ಬಣ್ಣಿಸಿದ್ದಾರೆ.
ಪ್ರಸಕ್ತ ಸಾಲಿನ ಬಜೆಟ್ ಬಗ್ಗೆ ಬೀದರ್ ನ ಹಲವಾರು ವಲಯದ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹತ್ವದ ಯೋಜನೆಗಳಿಲ್ಲ
ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮಹತ್ವದ ಯೋಜನೆಗಳಿಲ್ಲ ಎಂದು ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪುರ ಹೇಳಿದ್ದಾರೆ.
ಡಬಲ್ ಎಂಜಿನ್ ಸರ್ಕಾರದ ಮೇಲೆ ರಾಷ್ಟ್ರ ಹಾಗೂ ರಾಜ್ಯದ ಜನ ಇಟ್ಟುಕೊಂಡಿದ್ದ ನಿರೀಕ್ಷೆ ಬಜೆಟ್ನಲ್ಲಿ ಹುಸಿಯಾಗಿದೆ ಎಂದು ತಿಳಿಸಿದ್ದಾರೆ. ಬಜೆಟ್ ರೈತರು, ಬಡವರು, ಶ್ರಮಿಕರ ಪರವಾಗಿಲ್ಲ. ಒಟ್ಟಾರೆ ನಿರಾಶಾದಾಯಕವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರ ಆಶಯ ಈಡೇರಿಸುವ ಬಜೆಟ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಪ್ರಸಕ್ತ ವರ್ಷದ ಬಜೆಟ್ ಎಲ್ಲ ವರ್ಗಗಳ ಜನರ ಆಶಯಗಳನ್ನು ಈಡೇರಿಸಲಿದೆ ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ತಿಳಿಸಿದ್ದಾರೆ.
ಬಜೆಟ್ ಎಲ್ಲರ ಕಲ್ಯಾಣ ಕೇಂದ್ರೀತವಾಗಿದೆ. ಜನಪರವಾಗಿದೆ ಎಂದು ಹೇಳಿದ್ದಾರೆ. ರೈತರು, ಸಣ್ಣ ಉದ್ದಿಮೆದಾರರು, ವೃತ್ತಿ ಪರರು ಸೇರಿದಂತೆ ಎಲ್ಲ ವರ್ಗಗಳ ಬೆಳವಣಿಗೆಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸ್ವಾಮಿನಾಥನ್ ವರದಿ ಪ್ರಸ್ತಾಪ ಇಲ್ಲ
ಕೇಂದ್ರ ಸರ್ಕಾರ ಮಂಡಿಸಿದ ಪ್ರಸಕ್ತ ವರ್ಷದ ಬಜೆಟ್ನಲ್ಲಿ ಸ್ವಾಮಿನಾಥನ್ ವರದಿ ಜಾರಿ ಕುರಿತು ಯಾವುದೇ ಪ್ರಸ್ತಾವ ಇಲ್ಲ ಎಂದು ರೈತ ಮುಖಂಡ ನಿರ್ಮಲಕಾಂತ ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.
ಕೃಷಿ ವಲಯಕ್ಕೆ ಖಾತರಿ ಯೋಜನೆಗಳಿಲ್ಲ. ಸಾಲ ನೀತಿ ಘೋಷಿಸಿಲ್ಲ. ಹಳ್ಳಿಗಳ ಯುವಕರು ಗುಳೆ ಹೋಗುವುದನ್ನು ತಪ್ಪಿಸಲು ಯೋಜನೆ ಪ್ರಕಟಿಸಿಲ್ಲ. ರೈತರ ಪಾಲಿಗೆ ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಬಜೆಟ್ ಜನ ಪರ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2023-24ನೇ ಸಾಲಿನ ಬಜೆಟ್ ಜನಪರವಾಗಿದೆ ಎಂದು ವಿ.ಕೆ. ಇಂಟರ್ನ್ಯಾಷನಲ್ ಪದವಿ ಕಾಲೇಜು ಪ್ರಾಚಾರ್ಯ ನಾಗೇಶ ಬಿರಾದಾರ ಹೇಳಿದ್ದಾರೆ. ಬಜೆಟ್ನಲ್ಲಿ ರೈತರು, ಯುವಕರು, ಮಹಿಳೆಯರು ಹಾಗೂ ಹಿಂದುಳಿದ ವರ್ಗದವರ ಏಳಿಗೆಗೆ ಒತ್ತು ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಪರ ಬಜೆಟ್
ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2023-24ನೇ ಸಾಲಿನ ಬಜೆಟ್ ಅಭಿವೃದ್ಧಿ ಪರವಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಎಸ್. ಪಾಟೀಲ ಗಾದಗಿ ಹೇಳಿದ್ದಾರೆ. ಎಲ್ಲ ಕ್ಷೇತ್ರಗಳು ಹಾಗೂ ಎಲ್ಲ ವರ್ಗಗಳ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಬಜೆಟ್, ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ.
ರೈತರು, ಯುವಕರು, ಮಹಿಳೆಯರು, ಹಿಂದುಳಿದ ವರ್ಗಗಳು ಸೇರಿದಂತೆ ಸರ್ವರ ಏಳಿಗೆ, ಕೃಷಿ, ಪ್ರವಾಸೋದ್ಯಮ ಕ್ಷೇತ್ರಗಳ ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ. ₹7 ಲಕ್ಷ ವರೆಗೆ ಆದಾಯ ತೆರಿಗೆ ವಿನಾಯಿತಿ, ಅಂತರರಾಷ್ಟ್ರೀಯ ಕೌಶಲಾಭಿವೃದ್ಧಿ ಕೇಂದ್ರ, ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆ ಮೊದಲಾದ ಘೋಷಣೆಗಳು ಮಹತ್ವದ್ದಾಗಿವೆ ಎಂದು ಹೇಳಿದ್ದಾರೆ.