ಬೀದರ್: ವಿದ್ಯುತ್ ದೀಪಗಳಿಂದ ಅಲಂಕೃತ ಬಹಮನಿ ಸುಲ್ತಾನರ ಕೋಟೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಸ್ಮಾರಕಗಳ ಮೇಲೆ ಹಾಕಲಾದ ಬಣ್ಣದ ಬೆಳಕು ಕೋಟೆ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಅತ್ತ ಪಡುವಣಕ್ಕೆ ಸೂರ್ಯ ಬಾನಿನಿಂದ ಜಾರುತ್ತಲೇ ಇತ್ತ ಮಿನುಗುವ ವಿದ್ಯುತ್ ದೀಪಗಳು ಹೊತ್ತಿಕೊಂಡು ನಕ್ಷತ್ರ ಲೋಕವನ್ನೇ ಸೃಷ್ಟಿಸುತ್ತಿದೆ.
ಹೌದು! ಪರಂಪರೆ ನಗರದ ಕೋಟೆ ಆವರಣದಲ್ಲಿ ಬೆಳಿಗ್ಗೆ ಮೋಜಿನ ಸಾಮ್ರಾಜ್ಯ ಸೃಷ್ಟಿಯಾದರೆ, ರಾತ್ರಿ ನಕ್ಷತ್ರ ಲೋಕ ಅನಾವರಣಗೊಳ್ಳುತ್ತಿದೆ. ಮಹಿಳೆಯರು, ಮಕ್ಕಳು ಕುಟುಂಬದ ಸದಸ್ಯರೊಂದಿಗೆ ಜನ ಬೀದರ್ ಉತ್ಸವಕ್ಕೆ ಬರುತ್ತಿದ್ದಾರೆ. ಮಕ್ಕಳ ಉತ್ಸವದಲ್ಲಿ ಪಾಲ್ಗೊಂಡು ಮಕ್ಕಳು ಮೋಜು, ಮಸ್ತಿ ಮಾಡಿ ಸಂಭ್ರಮಿಸಿದರೆ, ಯುವಕರು ಕೋಟೆಯೊಳಗಿನ ಐತಿಹಾಸಿಕ ಬೊಮ್ಮಗೊಂಡೇಶ್ವರ ಕೆರೆಯಲ್ಲಿ ಮೀನಿನಂತೆ ದೋಣಿಗಳಲ್ಲಿ ಓಡಾಡಿ ಆನಂದಿಸುತ್ತಿದ್ದಾರೆ.
ಸಂಜೆಯಾಗುತ್ತಲೇ ಮುಖ್ಯವೇದಿಕೆಯಲ್ಲಿ ಸಂಗೀತ ಲೋಕ ಗರಿಬಿಚ್ಚಿಕೊಳ್ಳುತ್ತಿದೆ. ಸ್ಥಳೀಯ ಕಲಾವಿದರಿಂದ ಶುರುವಾಗುವ ಕಾರ್ಯಕ್ರಮ ನಿಧಾನವಾಗಿ ಕಾವು ಪಡೆದು ರಾಜ್ಯ ಮಟ್ಟದ ಹಾಗೂ ರಾಷ್ಟ್ರದ ಕಲಾವಿದರ ಪ್ರವೇಶದ ಮೂಲಕ ಸಂಗೀತ ಶಿಖರ ತಲುಪುತ್ತಿದೆ.
ಹುಚ್ಚೆದ್ದು ಕುಣಿದ ಪ್ರೇಕ್ಷಕರು..
ಖ್ಯಾತ ಗಾಯಕರಾದ ಕುಮಾರ ಸಾನು ಹಾಗೂ ಮಂಗಲಿ ಅವರ ಹಾಡು ಕೇಳಲು ಜಿಲ್ಲೆಯ ತಾಲ್ಲೂಕು ಕೇಂದ್ರಗಳು, ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದ ಗಡಿ ಗ್ರಾಮಗಳಿಂದಲೂ ಜನರು ಬಂದಿದ್ದರು. ಗಾಯಕ ಕುಮಾರ ಸಾನು ಅವರು ಆಶಿಕಿ, ದಿವಾನಾ ಚಿತ್ರದ ಹಾಡುಗಳನ್ನು ಹಾಡಿ ಸಂಗೀತ ಶೋತೃಗಳ ಮನ ತಣಿಸಿದರು.
ಹೈದರಾಬಾದ್ನ ಗಾಯಕಿ ಮಂಗಲಿ ವೇದಿಕೆಗೆ ಬರುತ್ತಿದ್ದಂತೆಯೇ ಪ್ರೇಕ್ಷಕರು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ರಾರಾ ರಕ್ಕಮ್ಮ… ಹಾಡಿಗೆ ಯುವಕರು ಹುಚ್ಚೆದ್ದು ಕುಣಿದರು. ಮೊಬೈಲ್ ಟಾರ್ಚ್ಗಳನ್ನು ಆನ್ ಮಾಡಿ ಮುಖ್ಯ ವೇದಿಕೆಯತ್ತ ಕೈಬೀಸಿ ಸಂಭ್ರಮಿಸಿದರು. ಅನುರಾಧಾ ಭಟ್ ಹಾಗೂ ವೀರ ಸಮರ್ಥ ಅವರು ಸಹ ಕನ್ನಡಿಗರಿಗೆ ಸಂಗೀತದ ರಸದೌತಣ ನೀಡಿದರು. ಕಲಾವಿದರ ಹಾಡಿಗೆ ತಕ್ಕಂತೆ ಬೆಳಕಿನ ಕಿರಣಗಳು ಪ್ರೇಕ್ಷಕರು ಹಾಗೂ ವೇದಿಕೆಯಲ್ಲಿ ಹರಿದಾಡುತ್ತಿದ್ದರಿಂದ ಪ್ರೇಕ್ಷಕರಲ್ಲಿ ಪುಳಕ ಉಂಟು ಮಾಡಿತು.
ಗುರದರಹನ್ ಸಿಂಗ್ ಮಲ್ವಾ ಸಭ್ಯಾಚರಕ ಕ್ಲಬ್ ಪಟಿಯಾಲಾದಿಂದ ಪಂಜಾಬಿ ಭಾಂಗಡಾ ಡಾನ್ಸ್, ಮುಂಬೈನ ಮಹಾರಾಷ್ಟ್ರ-ಸುರಭಿ ಕಾಳಿದಾಸ ಮನಸಾಳೆ ಲಾವಣಿ ನೃತ್ಯ, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಪ್ರಾಯೋಜಕತ್ವದ ರಾಷ್ಟ್ರ ಮಟ್ಟದ ಜಾನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಿತು. ಉಷಾ ಪ್ರಭಾಕರ ಭರತನಾಟ್ಯ, ಗೀತಾ ಹಾಗೂ ತಂಡದಿಂದ ವಿಶಿಷ್ಟ ಸಮೂಹ ನೃತ್ಯ ಪ್ರದಶನಗೊಂಡಿತು.