ಬೀದರ್: ವಸತಿ ಶಾಲೆಗಳಲ್ಲಿ ಕುವೆಂಪು ಅವರ ಘೋಷವಾಕ್ಯವನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎಂಬ ಕುವೆಂಪು ಅವರ ಘೋಷವಾಕ್ಯವನ್ನು ‘ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಿಸಲು ಹೊರಟಿರುವ ನಡೆ ಖಂಡನಾರ್ಹವಾದುದು ಎಂದು ಎಬಿವಿಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದರು.
ರಾಜ್ಯ ಸರ್ಕಾರ ಶಾಲೆ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಸರಸ್ವತಿ, ಗಣಪತಿ ಮತ್ತಿತರ ಧಾರ್ಮಿಕ ಪೂಜೆ ಮಾಡುವುದನ್ನು ನಿಷೇಧ ಮಾಡಿತ್ತು. ಈಗ ವಸತಿ ಶಾಲೆಗಳಿಗೆ ಕೈ ಹಾಕಿದೆ ಎಂದು ಆರೋಪಿಸಿದರು.
ಎಬಿವಿಪಿ ತಾಲ್ಲೂಕು ಸಂಚಾಲಕ ಅಂಬ್ರೇಶ ಬಿರಾದಾರ, ಅಮರ ಸ್ವಾಮಿ, ಪವನ್ ಕುಂಬಾರ, ನಾಗರಾಜ್, ಮಂಜುನಾಥ್, ಅಭಿಷೇಕ್, ಶಂಭು, ಮಹೇಶ್, ಅಂಕುಶ, ಸಚಿನ್, ಪವನ್, ದಿನೇಶ್, ಪವನ್ ಪ್ರಸಾದ್, ರವಿ ಇತರರಿದ್ದರು.