ಕಲಬುರಗಿ: ನನ್ನನ್ನು ಕಂಡರೆ ಎಚ್.ಡಿ.ಕುಮಾರಸ್ವಾಮಿಗೆ ಭಯ ಹೀಗಾಗಿ ನನ್ನನ್ನು ಟಾರ್ಗೆಟ್ ಮಾಡಿ ಮಾತಾಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ನಗರದ ಐವನ್ ಎ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ವಿರೋಧ ಪಕ್ಷದ ನಾಯಕ ಸ್ಥಾನ ಸಾಂವಿಧಾನಿಕವಾದದ್ದು, ಎರಡು ಬಾರಿ ಮುಖ್ಯಮಂತ್ರಿಯಾದವರು ಸಂವಿಧಾನಿಕ ಹುದ್ದೆಗೆ ಅವಮಾನ ಮಾಡುವುದು ಸರಿಯೇ? ಹಾಗಾದರೇ, ಈ ಹಿಂದೆ ದೇವೇಗೌಡರು ಸಹ ವಿರೋಧ ಪಕ್ಷದ ನಾಯಕರಾಗಿದ್ದರು. ದೇವೇಗೌಡರು ನಿರ್ವಹಿಸಿದ ಹುದ್ದೆ ಕೂಡ ಪುಟಗೋಸಿಯಾ ಎಂದು ತಿರುಗೇಟು ನೀಡಿದರು.
ರಾಜಕೀಯದಲ್ಲಿ ಭಯ ಇರೋರು, ಟಾರ್ಗೆಟ್ ಮಾಡುವುದು ಸಹಜ. ಕುಮಾರಸ್ವಾಮಿಗೆ ನನ್ನನ ಕಂಡರೇ, ಭಯ. ಹೀಗಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು. ಬಿಎಸ್ ವೈ ಭೇಟಿ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ: ಕುಮಾರಸ್ವಾಮಿ ಬಗ್ಗೆ ನಾನು ಮಾತಾಡಬಾರದು ಅಂದುಕೊಂಡಿದ್ದೆ. ಬಹಳ ಸಲ ನನ್ನ ವೈಯಕ್ತಿಕವಾಗಿ ಮಾತನಾಡುತ್ತಿರುವುದರಿಂದ ಮಾತನಾಡಬೇಕಾಗಿದೆ.
ಐಟಿ ರೇಡ್ ಬಗ್ಗೆ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಬಿಎಸ್ ವೈ ಹುಟ್ಟು ಹಬ್ಬ ಮತ್ತು ಮೀಟಿಂಗ್ ನಲ್ಲಿ ನಾನು ಭೇಟಿ ಆಗಿದ್ದೇನೆ ಹೊರತು ವ್ಯಯಕ್ತಿಕವಾಗಿ ಭೇಟಿ ಮಾಡಿಲ್ಲ ಎಂದರು. ರಾಜಕೀಯದಲ್ಲಿ ನೀತಿ ನಿಯಮಗಳು ಇರುತ್ತವೆ. ನಾನು ಅಧಿಕಾರದಲ್ಲಿರುವವರನ್ನು ವೈಯಕ್ತಿಕವಾಗಿ ಭೇಟಿ ಮಾಡಲ್ಲ. ಯಡಿಯೂರಪ್ಪ ಅವರನ್ನು ನಾನು ಭೇಟಿಯಾಗಿದ್ದೇನೆ ಅಂತ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಭೇಟಿಯಾದ ಬಗ್ಗೆ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.