ಚಾಮರಾಜನಗರ: ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಐದು ವರ್ಷ ಮುಂದುವರಿಯುವುದರಿಂದ ಯಾವುದೇ ರೀತಿಯಲ್ಲಿ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬದಲಾಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಕುರ್ಚಿ ಖಾಲಿ ಆಗಿದ್ಯಾ?. ಸದ್ಯ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಮುಂದುವರೆಯುತ್ತಿದ್ದೇವೆ, ಅವರ ನೇತೃತ್ವದಲ್ಲೇ ಐದು ವರ್ಷ ಮುಂದುವರೆಯುತ್ತೇವ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತು ಮಾತನಾಡಿ, ವಿದೇಶಕ್ಕೆ ಹೋದರೆ ತಪ್ಪೇನಿದೆ, ಸ್ನೇಹಿತರ ಜತೆ ಊಟಕ್ಕೆ ಹೋಗುವುದು, ಪ್ರವಾಸಕ್ಕೆ ಹೋಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಇಷ್ಟೇ ಅಲ್ಲದೆ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆಗಳಿಗೆ ಯಾವುದೇ ಬೆಲೆ ಇಲ್ಲ.
ಗೃಹ ಸಚಿವ ಪರಮೇಶ್ವರ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿ ಸಿ.ಟಿ. ರವಿಯವರಿಗೆ ಮಾಡೋಕೆ ಏನು ಕೆಲಸ ಇಲ್ಲ, ಅವರು ಅಪರಾಧ ಮಾಡಿದ್ದಾರೆ. ಆ ಅಪರಾಧಕ್ಕೆ ಅವರು ಉತ್ತರ ಕೊಡಲಿ, ಶಿಕ್ಷೆ ಅನುಭವಿಸಲಿ. ಜನಪ್ರತಿನಿಧಿಯಾಗಿ ಮಹಿಳೆಯ ಬಗ್ಗೆ ಅಗೌರವಯುತವಾಗಿ ಮಾತನಾಡಿ, ಅವಾಚ್ಯ ಶಬ್ಧಗಳನ್ನು ಉಪಯೋಗ ಮಾಡಿರುವ ಅವರಿಗೆ ಏನಾದರೂ ನೈತಿಕತೆ ಇದೆಯಾ? ಎಂದು ಕೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಹಿಡಿತದಲ್ಲಿದೆ ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಬಡವರ ಹಿಡಿತದಲ್ಲಿದೆ, ಬಡವರ ಪರ ಕೆಲಸ ಮಾಡುತ್ತಿದೆ” ಎಂದರಲ್ಲದೆ, ಸಿಎಂ ಸಿದ್ದರಾಮಯ್ಯ ವಿರುದ್ಧ ಇ.ಡಿ. ತನಿಖೆ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರ ಇಡಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ.ರಾಜಕೀಯ ದುರುದ್ದೇಶದಿಂದ ಕೇಂದ್ರ ಸರ್ಕಾರ ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಅದರಂತೆ ಇ.ಡಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ದೂರಿದ್ದಾರೆ.