ಬೆಂಗಳೂರು: ಯುವನಿಧಿ ಯೋಜನೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳು ನೋಂದಾಯಿಸುವಂತಾಗಲು ಜನವರಿ 06 ರಿಂದ 20 ರವರೆಗೆ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ರಾಜ್ಯಾದಾದ್ಯಂತ ಎಲ್ಲಾ ರಾಜ್ಯ ಅಂಗೀಕೃತ ವಿಶ್ವವಿದ್ಯಾಲಯಗಳ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಹಮ್ಮಿಕೊಳ್ಳಲಾಗಿದೆ.
2023 ಹಾಗೂ 2024 ನೇ ಸಾಲಿನಲ್ಲಿ ಪದವಿ , ಸ್ನಾತಕೋತ್ತರ ಪದವಿ , ಡಿಪ್ಲೋಮಾ ತೇರ್ಗಡೆಯಾದ ಅಭ್ಯರ್ಥಿಗಳು ಈ ಅಭಿಯಾನದ ಪ್ರಯೋಜನ ಪಡೆದು ಕೊಳ್ಳಬಹುದಾಗಿದೆ. ಕರ್ನಾಟಕ ಸರ್ಕಾರದ ಐದು ಖಾತರಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯು ರಾಜ್ಯದ 2023-24 ಹಾಗೂ 2024-25 ನೇ ಸಾಲಿನಲ್ಲಿ ಪದವಿ , ಸ್ನಾತಕೋತ್ತರ ಪದವಿ, ಡಿಪ್ಲೋಮಾ ತೇರ್ಗಡೆಯಾದ ಅರ್ಹ ನಿರುದ್ಯೋಗಿ ಯುವಕ, ಯುವತಿಯರಿಗೆ ನಿರುದ್ಯೋಗ ಭತ್ಯೆಯನ್ನು (ಪದವಿ ಉತ್ತೀರ್ಣರಾದವರಿಗೆ ರೂ. 3000/- ಪ್ರತಿ ಮಾಹೆ ಹಾಗೂ ಡಿಪ್ಲೋಮಾ ಉತ್ತೀರ್ಣರಾದವರಿಗೆ ರೂ. 1500-ಪ್ರತಿ ಮಾಹೆಯಂತೆ, ಗರಿಷ್ಠ 2 ವರ್ಷಗಳ ಅವಧಿಗೆ ಅಥವಾ ಉದ್ಯೋಗ ಸಿಗುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅದು) ಸಬಲೀಕರಣಗೊಳಿಸಲು ಜಾರಿಗೊಳಿಸಿರುವ ಸರ್ಕಾರದ ಮಹತ್ತರ ಯೋಜನೆ ಇದಾಗಿದೆ.
2023-24 ಮತ್ತು 2024-25 ನೇ ಸಾಲಿನಲ್ಲಿ ಪದವಿ,ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ತೇರ್ಗಡೆ ಹೊಂದಿದವರು. ಫಲಿತಾಂಶ ಪ್ರಕಟವಾದ 180 ದಿನಗಳ ನಂತರವೂ ಸಾರ್ವಜನಿಕ, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರದವರು ಹಾಗೂ ಸ್ವಯಂ-ಉದ್ಯೋಗದಲ್ಲಿ ಇಲ್ಲದೇ ಇರುವವರು. ಉನ್ನತ ವ್ಯಾಸಂಗವನ್ನು ಮುಂದುವರಿಸದೇ ಇರುವವರು. ಕನಿಷ್ಠ 6 ವರ್ಷ ಕರ್ನಾಟಕದ ರಹವಾಸಿ ಆಗಿರಬೇಕು.
ನೋಂದಣಿಗಾಗಿ ಸೇವಾಸಿಂಧು ಪೋರ್ಟಲ್ ww.sevasindhugs.karnataka.gov.in, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ಉದ್ಯೋಗ ವಿನಿಮಯ ಕಚೇರಿಗೆ ಭೇಟಿ ನೀಡುವುದು ಅಥವಾ ಸಹಾಯವಾಣಿ ಸಂಖ್ಯೆ 1800 5997154 ಸಂಪರ್ಕಿಸಬಹುದು ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತರು ತಿಳಿಸಿದ್ದಾರೆ.