ತುಮಕೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ಹಾಕಿದ್ದ ವೀರ ಸಾರ್ವಕರ್ ಫ್ಲೆಕ್ಸ್ ಹರಿದು ಹಾಕಿರುವ ದುಷ್ಕರ್ಮಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತುಮಕೂರು ನಗರದ ಎಸ್.ಪಿ ಕಛೇರಿಗೆ ತೆರಳಿ ಎಸ್.ಪಿ ರಾಹುಲ್ ಕುಮಾರ್ ರವರಿಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್ ದೂರು ಸಲ್ಲಿಸಿದ್ದಾರೆ.
ಭಾರತದ 75ನೇ ಸ್ವಾತಂತ್ರ ದಿನ ಅಮೃತಮಹೋತ್ಸವದ ಅಂಗವಾಗಿ ನಗರದಾದ್ಯಂತ 85 ಜನ ಸ್ವಾತಂತ್ರ್ಯಹೋರಾಟಗಾರರ ಸಣ್ಣ ಮಾಹಿತಿಯನ್ನು ಒಳಗೊಂಡ ಭಾವಚಿತ್ರದ ಫ್ಲೆಕ್ಸ್ ಹಾಕಲಾಗಿತ್ತು. ಅಪ್ರತಿಮ ಹೋರಾಟಗಾರರಾದ ವೀರ ಸಾರ್ವಕರ್ ಅವರ ಪೋಟೋವನ್ನು ಕಿತ್ತು ಹಾಕುವ ಮೂಲಕ ಅವಮಾನಿಸಲಾಗಿದೆ. ಇದು ರಾಷ್ಟ್ರವಿರೋಧಿ ಕೃತ್ಯವಾಗಿದೆ. ನಾಡಿನ ಜನರಿಗೆ ಅಪಮಾನ ಮಾಡಿದಂತಾಗಿದ್ದು, ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಆದ್ದರಿಂದ ಈ ಕೃತ್ಯವೆಸಗಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕೆಂದು ಎಸ್.ಪಿ.ರಾಹುಲ್ ಕುಮಾರ್ ಅವರಿಗೆ ದೂರು ಸಲ್ಲಿಸಿದರು.
ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಹೆಬ್ಬಾಕ, ನಗರಾಧ್ಯಕ್ಷ ಹನುಮಂತರಾಜು,ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್, ಮಂಜುನಾಥ್, ಮುಖಂಡರಾದ ಇಂದ್ರಕುಮಾರ್, ಮಹೇಶಬಾಬು, ಯುವಮೋರ್ಚಾ ಅಧ್ಯಕ್ಷ ಯಶಸ್ಸು, ವಿನಯ್, ರುದ್ರೇಶ್ ಮತ್ತಿತರರು ಇದ್ದರು.