ತುಮಕೂರು: ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಅತಿಯಾದ ಆತ್ಮವಿಶ್ವಾಸದ ಜೊತೆಗೆ,ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡುಗಳ ಬಗ್ಗೆ ನಿರ್ಲಕ್ಷ ತೋರಿದ್ದೇ ಕಾರಣ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ ಗೌಡ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಎಂ.ಎಲ್.ಸಿ. ಚಿದಾನಂದಗೌಡ ಅಭಿಮಾನಿ ಬಳಗ ಹಾಗೂ ವಿಧಾನಪರಿಷತ್ ಸದಸ್ಯ ವೈ.ಎನ್.ನಾರಾಯಣಸ್ವಾಮಿ ಬಳಗದವತಿಯಿಂದ ತುಮಕೂರು ನಗರ ಮತ್ತು ಗ್ರಾಮಾಂತರ ಶಾಸಕರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು,ಸರಕಾರದ ವಿರುದ್ದ ಇದ್ದ ಜನಾಕೋಶ್ರವನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳದೆ ಹೋಗಿದ್ದು ಸಹ ಪಕ್ಷದ ಸೋಲಿಗೆ ಕಾರಣವಾಯಿತು ಎಂದರು.
ಬಿಜೆಪಿ ಪಕ್ಷದ ಹೊಸ ಪ್ರಯತ್ನದ ಫಲವಾಗಿ ಹೊಸಮುಖಗಳಿಗೆ ಟಿಕೇಟ್ ನೀಡಿದ್ದರಿಂದ ೫೩ ಜನರ ಹಿರಿಯರು ಪಕ್ಷ ಬಿಟ್ಟು ಹೊರ ನಡೆದರು.ಇದು ಒಂದು ರೀತಿಯ ಒಳ್ಳೆಯ ಬೆಳವಣಿಗೆಯಾದರೂ,ಅದರ ನಷ್ಟವನ್ನು ತುಂಬಿಕೊಳ್ಳಲು ನಮಗೆ ಸಮಯಾವಕಾಶ ದೊರೆಯಲಿಲ್ಲ.ನಮ್ಮ ಜಿಲ್ಲೆಯಲ್ಲಿಯೂ ಚಿಕ್ಕನಾಯಕನಹಳ್ಳಿಯ ಕೆ.ಎಸ್.ಕಿರಣಕುಮಾರ್,ಗುಬ್ಬಿಯ ಬೆಟ್ಟಸ್ವಾಮಿ ಮತ್ತು ತುಮಕೂರು ನಗರದ ಎಸ್.ಶಿವಣ್ಣ ಅವರುಗಳು ಪಕ್ಷದಿಂದ ಹೊರಹೋಗದಂತೆ ತಡೆಯುವ ಪ್ರಯತ್ನ ಆಗಬೇಕಿತ್ತು. ಇದರಿಂದ ನಾವುಗಳು ಐದು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಶಾಸಕ ಬಿ.ಸುರೇಶಗೌಡ ನುಡಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ನಂಬಿ ಜನ ಮತ ಹಾಕಿದ್ದಾರೆ.ಹಾಗಾಗಿ ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸುವವರೆಗೂ ಬಿಜೆಪಿ ಪಕ್ಷ ರಾಜ್ಯದಲ್ಲಿ ನಿದ್ದೆ ಮಾಡುವುದಿಲ್ಲ. ಸದನದ ಒಳಗೆ ಮತ್ತು ಹೊರಗೆ ನಿರಂತರವಾಗಿ ಇದರ ಹಿಂದೆ ಬೀಳುತ್ತೇವೆ. ಯಾವುದೇ ಷರತ್ತು ಇಲ್ಲದೆ ಎಲ್ಲರಿಗೂ ಉಚಿತ ವಿದ್ಯುತ್, ಮನೆಯ ಗೃಹಣಿಗೆ ೨೦೦೦ ರೂ, ಮಹಿಳೆಯರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲಿ ಉಚಿತ ಪ್ರಯಾಣ,೧೦ ಕೆ.ಜಿ.ಅಕ್ಕಿ, ನಿರುದ್ಯೋಗ ಭತ್ಯೆ ಎಲ್ಲವನ್ನು ಈಡೇರಿಸು ವವರೆಗೂ ಹೋರಾಟ ನಡೆಸುತ್ತೇವೆ. ಕೆ.ಎಸ್.ಆರ್.ಟಿ.ಸಿ. ಉಚಿತ ಪ್ರಯಾಣಕ್ಕೆ ತಿಂಗಳಿಗೆ ೨೦೦೦ ಕೋಟಿ ಬೇಕು. ಅದು ಹೇಗೆ ನಿಭಾಯಿಸುತ್ತಾರೆ ನಾವು ನೋಡುತ್ತೇವೆ ಎಂದು ಶಾಸಕ ಸುರೇಶಗೌಡ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಮತ್ತು ಡಿಕೆಶಿ ಶಕ್ತಿ ವಿರುದ್ದ ಗಟ್ಟಿ ವಿರೋಧಪಕ್ಷವಾಗಿ ಬಿಜೆಪಿ ಕೆಲಸ ಮಾಡಲಿದೆ.ನಿಮ್ಮಗಳ ಋಣ ತೀರಿಸುವ ಕೆಲಸ ಮಾಡುತ್ತೆವೆ.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕೆನ್ನುವುದು ನಮ್ಮ ಇಚ್ಚೆಯಾಗಿದೆ. ನಮ್ಮಲ್ಲಿ ತಪ್ಪುಗಳಿದ್ದರೆ ತಿದ್ದಿ ಸರಿದಾರಿಗೆ ತನ್ನಿ ಎಂದು ಮನವಿ ಮಾಡಿದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಈ ಬಾರಿಯ ಚುನಾವಣೆ ನಮಗೆ ಒಂದು ಸವಾಲಾಗಿತ್ತು.ಪ್ರಧಾನಿ ಮೋದಿ, ಇನ್ನಿತರ ರಾಷ್ಟ್ರನಾಯಕರ ರೋಡ್ ಷೋ, ಕಾರ್ಯಕ್ರಮಗಳು ಹಾಗೂ ಯಾವುದೇ ಪಕ್ಷಕ್ಕೆ ಸೇರದ ಸಮಾನಮನಸ್ಕರ ಇಂತಹ ಕೂಟಗಳು ಸಹ ನಮ್ಮ ಗೆಲುವಿಗೆ ಸಹಕಾರಿಯಾದವು.ಸ್ವಯಂ ಪ್ರೇರಿತರಾಗಿ ಜನ ಮತ ನೀಡಿದ್ದಾರೆ.ಅವರ ಯಾವುದೇ ಕೆಲಸಗಳಿದ್ದರೂ ಮಾಡಿಕೊಡಲು ನಾವು ಸಿದ್ದ.ಮುಂದಿನ ಪದವಿಧರ ಕ್ಷೇತ್ರದ ಚುನಾವಣೆ ಯಲ್ಲಿ ವೈ.ಎ.ಎನ್.ಗೆಲ್ಲ ಬೇಕಿದೆ. ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳೋಣ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ,ನಾನು ವಿಧಾನಪರಿಷತ್ ಸದಸ್ಯನಾಗಲು ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರದ ಇಬ್ಬರು ಶಾಸಕರ ಸಹಕಾರವಿದೆ. ಇದೊಂದು ಸಂತೋಷಕೂಟ.ಆಗಿರುವ ತಪ್ಪುಗಳನ್ನು ತಿದ್ದುಕೊಂಡು, ಮುಂದಿನ ಸವಾಲುಗಳನ್ನು ದಿಟ್ಟತನದಿಂದ ಎದುರಿಸಲು ಬೇಕಾದ ತಯಾರಿ ನಡೆಸಲು ಇಂತಹ ಕೂಟಗಳ ಅಗತ್ಯವಿದೆ. ತುಮಕೂರು ಗ್ರಾಮಾಂತರದಲ್ಲಿ ಬಿ.ಸುರೇಶಗೌಡ ಅವರು ಮಾಡಿದ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಅವರ ಚುನಾವಣಾ ತಂತ್ರಗಾರಿಕೆ ಅವರನ್ನು ಕೈಹಿಡಿದಿವೆ.ಹಾಗೆಯೇ ನಗರದಲ್ಲಿಯೂ ಜೋತಿಗಣೇಶ್ ಅವರದೇ ಆದ ರೀತಿಯಲ್ಲಿ ಚುನಾವಣೆಯನ್ನು ಎದುರಿಸಿದ್ದಾರೆ.ಇಬ್ಬರು ಶಾಸಕರೊಂದಿಗೆ ನಾನು ಸೇರಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತೇವೆ ಎಂದರು.
ಉದ್ಯಮಿ ಹಾಗೂ ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ್ ಮಾತನಾಡಿ, ಮತದಾರರಿಗೆ ಅಭಿನಂದನೆ ಸಲ್ಲಿಸುವ ಸಮಾರಂಭವಿದು. ವಿರೋಧ ಪಕ್ಷಗಳ ಹಲವಾರು ಭರವಸೆಗಳ ಸುನಾಮಿಯ ನುಡವೆಯೂ ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇಬ್ಬರ ಪ್ರರಿಶ್ರಮ ಮತ್ತು ಕಾರ್ಯಕರ್ತರ ಗಟ್ಟಿ ನಿಲುವು, ಗೆಲುವಿಗೆ ಸಹಕಾರಿಯಾಗಿದೆ.ಕ್ಷೇತ್ರಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ತರುವ ಕೆಲಸ ಮಾಡಲಿ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಮೋದಿ ಕೈ ಬಲಪಡಿಸೋಣ ಎಂದು ಸಲಹೆ ನೀಡಿದರು.
ಪ್ರೊ.ಕೆ.ಚಂದ್ರಣ್ಣ ಪ್ರಸ್ತಾವಿಕ ನುಡಿಗಳನ್ನಾಡಿದು.ವಿಧಾನಪರಿ?ತ್ ಸದಸ್ಯ ಚಿದಾನಂದ್ ಎಂ.ಗೌಡ,ದೊಡ್ಡಲಿಂಗಪ್ಪ, ಎಸ್.ಪಿ.ಚಿದಾನಂದ್, ಬೆಳ್ಳಿಲೋಕೇಶ್, ಕೆಂಪರಾಜು, ನಿವೃತ್ತ ಉಪನ್ಯಾಸಕ ರೇವಣ್ಣಸಿದ್ದಪ್ಪ, ವೈ.ಎ.ಎನ್.ಬಳಗದ ನಾಗಭೂಷಣ್, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.