ತುಮಕೂರು: ಕೊರಟಗೆರೆ ಸಮೀಪದ ಗೌಜಗಲ್ಲು ಗ್ರಾಮದಲ್ಲಿ ಕರಡಿಯನ್ನು ಕೊಂದು ತಿಂದ ಮತ್ತು ಕೃತ್ಯಕೆಕ ಸಹಕಾರ ನೀಡಿದ ಆರು ಮಂದಿಯನ್ನು ಬಂಧಿಸಲಾಗಿದೆ.ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಚಿಕ್ಕಬಸಯ್ಯನ ಮನೆಯ ಮೇಲೆ ದಾಳಿ ಮಾಡಿದಾಗ ಕರಡಿ ಮಾಂಸ ಪತ್ತೆಯಾಗಿದೆ.
ಗೌಜಗಲ್ಲು ಗ್ರಾಮದ ಚಿಕ್ಕಬಸವಯ್ಯ, ಯತೀಶ, ನಾಗರಾಜ, ಶ್ರೀಧರ್, ರಾಮಯ್ಯ ಮತ್ತು ರಾಜಣ್ಣ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ.
ಕರಡಿಯನ್ನು ಬೇಟೆಯಾಡಿ ತಿಂದು ಉಳಿದ ಮಾಂಸವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಮತ್ತು ಇದಕ್ಕೆ ಸಹಕರಿಸಿದ ಆರೋಪದ ಮೇಲೆ ಈ ಆರು ಮಂದಿಯನ್ನು ಬಂಧಿಸಲಾಗಿದೆ.ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ, ಜಮೀನಿನ ಬಂಡೆಯ ಮೇಲೆ ಕರಡಿಯನ್ನು ಕೊಂದು ಮಾಂಸಕ್ಕಾಗಿ ಬೇರ್ಪಡಿಸಿರುವುದು ಗೊತ್ತಾಗಿದೆ. ಕರಡಿಯ ಮುಂಗಾಲು, ನಾಲಗೆ, ಬಾಲ, ಕೂದಲು, ಉಗುರು, ಕತ್ತರಿಸಲು ಬಳಸಿದ ಮಚ್ಚು ಪತ್ತೆಯಾಗಿದೆ.