ಬೆಂಗಳೂರು: ನಾನು ಯಾಕೆ ರಾಜೀನಾಮೆ ನೀಡಲಿ? ನಡೆದುಕೊಂಡ ನಿರ್ಧಾರಕ್ಕೆ ರಾಜ್ಯಪಾಲರೇ ರಾಜೀನಾಮೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತುರ್ತು ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೀಗೆ ಮಾಡುತ್ತಾರೆ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು. ರಾಜಕೀಯವಾಗಿ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ರಾಜಕೀಯವಾಗಿ ನಮಗೆ ಯಾಕೆ ಹಿನ್ನಡೆ ಆಗುತ್ತದೆ ಎಂದು ಪ್ರಶ್ನಿಸಿದರು.
ಜನರ ಮುಂದೆ ಅವರೇ ಎಕ್ಸ್ಪೋಸ್ ಆಗಿದ್ದಾರೆ. ರಾಜ್ಯಪಾಲರ ವಿರುದ್ದ ರಾಷ್ಟ್ರಪತಿಗಳಿಗೆ ದೂರು ಕೊಡುವ ಬಗ್ಗೆ ನಾವು ಇಂದು ಚರ್ಚೆ ಮಾಡಿಲ್ಲ. INDIA ಒಕ್ಕೂಟದ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ನಿರಾಣಿ ಹಾಗೂ ಜನಾರ್ದನ ರೆಡ್ಡಿ ವಿರುದ್ದ ಇಲ್ಲಿಯವರೆಗೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ. ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ಲೂಟಿಯಲ್ಲಿ ಇವರ ಪಾತ್ರ ಇದೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ದೂರುದಾರ ಪ್ರದೀಪ್ ಕುಮಾರ್ ಜೆಡಿಎಸ್ ಲೀಗಲ್ ಸೆಲ್ ಅಧ್ಯಕ್ಷರು. ಕಾನೂನು ಸ್ವರೂಪ ಈಗ ಹೇಳುವುದಿಲ್ಲ, ಮಾಡುವಾಗ ಹೇಳುತ್ತೇನೆ. 7 ಕೋಟಿ ಜನರ ಬೆಂಬಲದಿಂದ ಸರ್ಕಾರ ರಚನೆಯಾಗಿದೆ. 135+1 ಸ್ಥಾನ ಗೆದ್ದಿದ್ದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.