ಬೆಂಗಳೂರು: ದೇಶದ ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ನ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀಕೃಷ್ಣನ್ ಹರಿಹರ ಶರ್ಮ ಅವರು ಬೆಂಗಳೂರಿನ ಬುಲ್ ಟೆಂಪಲ್ ರೋಡ್ ಕಚೇರಿಯಲ್ಲಿ ಜುಲೈ ೯ ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಅವರನ್ನು ಮುಂದಿನ ಮೂರು ವರ್ಷಗಳ ಅಧಿಕಾರಾವಧಿಗೆ ನೇಮಕ ಮಾಡಲಾಗಿದೆ. ಶ್ರೀಕೃಷ್ಣನ್ ಅವರು ಬ್ಯಾಂಕಿಂಗ್ನ ವಿವಿಧ ಕ್ಷೇತ್ರಗಳಲ್ಲಿ ಹಾಗೂ ತಂತ್ರಜ್ಞಾನ ಮತ್ತು ಪಾವತಿ ಕ್ಷೇತ್ರಗಳಲ್ಲಿ ಸುಮಾರು ನಲುವತ್ತು ವರ್ಷಗಳ ಅಪಾರ ಅನುಭವವನ್ನು ಹೊಂದಿದ್ದಾರೆ. ಈ ಮುಂಚೆ ಅವರು ಹೆಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್, ಯೆಸ್ ಬ್ಯಾಂಕ್ ಲಿಮಿಟೆಡ್ ಹಾಗೂ ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.
ಹೆಚ್ಡಿಎಫ್ಸಿ ಬ್ಯಾಂಕಿನಲ್ಲಿ ಶ್ರೀಕೃಷ್ಣನ್ ಸಂಸ್ಥಾಪಕ ತಂಡದ ಭಾಗವಾಗಿದ್ದರು ಹಾಗೂ ಬ್ಯಾಂಕಿನ ಕಾರ್ಪೊರೇಟ್ ಮತ್ತು ರಿಟೇಲ್ ಬ್ಯಾಂಕಿಂಗ್, ಖಜಾನೆ ಮತ್ತು ಬಂಡವಾಳ ಮಾರುಕಟ್ಟೆಗಳ ಮೂಲಸೌಕರ್ಯ ವ್ಯವಹಾರವನ್ನು ನಿರ್ವಹಿಸುವುದರಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಯೆಸ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಅವರು ವಾಣಿಜ್ಯ ಬ್ಯಾಂಕಿಂಗ್ ಮೂಲಸೌಕರ್ಯವನ್ನು ನಿರ್ವಹಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶ್ರೀಕೃಷ್ಣನ್ ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ನಲ್ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ್ದರು.
ಅಧಿಕಾರ ಸ್ವೀಕರಿಸಿ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಶ್ರೀಕೃಷ್ಣನ್ “ಕರ್ಣಾಟಕ ಬ್ಯಾಂಕ್ ಕುಟುಂಬಕ್ಕೆ ಸೇರಲು ಬಹಳ ಹೆಮ್ಮೆಯಾಗುತ್ತಿದೆ. ನೂರು ವರ್ಷಗಳ ಕಾಲ ನಂಬಿಕೆ ಮತ್ತು ಒಳ್ಳೆಯ ಹೆಸರನ್ನು ತಳಪಾಯವಾಗಿ ಬೆಳೆಸಿಕೊಂಡು ಸತತ ನೂರು ವರ್ಷಗಳ ಕಾಲವೂ ಲಾಭವನ್ನು ಘೋಷಿಸುತ್ತಾ ಬಂದಿರುವ ಈ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುವುದು ನನಗೂ ಒಂದು ವಿಶೇಷವಾದ ಗೌರವವಾಗಿದೆ.
ಸದೃಢವಾದ ಕರ್ಣಾಟಕ ಬ್ಯಾಂಕ್ ತನ್ನ ಉತ್ತಮ ಸಿಬ್ಬಂದಿಗಳ ತಂಡದೊಂದಿಗೆ ನಂಬಿಕೆ ಮತ್ತು ಉತ್ಕೃಷ್ಟತೆ ಎಂಬ ಮೂಲ ತತ್ವಗಳಿಗೆ ಬದ್ಧವಾಗಿ ಹೆಜ್ಜೆಗುರುತನ್ನು ಇನ್ನಷ್ಟು ವಿಸ್ತರಿಸಲಿದೆ. ಗ್ರಾಹಕರ ಸರ್ವರೀತಿಯ ಬ್ಯಾಂಕಿಂಗ್ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ, ಶೇರುದಾರರ ಆಶೋತ್ತರಗಳಿಗೆ ಪೂರಕವಾಗಿ ಬ್ಯಾಂಕ್ ಪ್ರಗತಿಯ ಪಯಣವನ್ನು ಮುಂದುವರಿಸಲಿದ್ದು, ಶತಮಾನೋತ್ಸವ ವರ್ಷವನ್ನು ಫಲಪ್ರದವಾಗಿ ಪೂರೈಸಲಿದ್ದೇವೆ ಎಂದು ನುಡಿದರು.
ಬ್ಯಾಂಕಿನ ಅಧ್ಯಕ್ಷರಾಗಿರುವ ಪಿ ಪ್ರದೀಪ್ ಕುಮಾರ್ ನೂತನ ಎಂಡಿ ಹಾಗೂ ಸಿಇಓ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರು, ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.