ಬೆಂಗಳೂರು: ಇಂಧನ ಭದ್ರತೆ ಕಾಪಾಡುವಲ್ಲಿ ಒಣ ಇಂಧನದ ಮಹತ್ವವನ್ನು ಒತ್ತಿ ಹೇಳಿದ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ, ಈ ವಲಯದಲ್ಲಿ ಸರ್ಕಾರ ವಿವಿಧ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆದ ಕಲ್ಲಿದ್ದಲು ಮತ್ತು ಗಣಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಜೋಶಿ, ಒಣ ಇಂಧನದ ಭವಿಷ್ಯದ ದೃಷ್ಟಿಕೋನವು ಸಕಾರಾತ್ಮಕವಾಗಿದೆ ಎಂದು ಹೂಡಿಕೆದಾರರಿಗೆ ತಿಳಿಸಿದರು.
ಕಲ್ಲಿದ್ದಲು ಸಚಿವಾಲಯವು ವಾಣಿಜ್ಯ ಗಣಿಗಾರಿಕೆಗಾಗಿ ನೀಡುತ್ತಿರುವ 141 ಬ್ಲಾಕ್ ಗಳ ಹರಾಜಿಗೆ ಹೂಡಿಕೆದಾರರನ್ನು ಆಕರ್ಷಿಸಲು ದೇಶಾದ್ಯಂತ ವಿವಿಧ ಸಮಾವೇಶಗಳನ್ನು ಆಯೋಜಿಸುತ್ತಿದೆ.
ಈ ಸಂದರ್ಭದಲ್ಲಿ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದ ಹಿರಿಯ ಅಧಿಕಾರಿಗಳು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
ದೇಶದ ಜಿಡಿಪಿಯಲ್ಲಿ ಗಣಿಗಾರಿಕೆ ಕ್ಷೇತ್ರದ ಪ್ರಸ್ತುತ ಕೊಡುಗೆ ಶೇಕಡಾ 0.9 ರಷ್ಟಿದೆ ಎಂದು ಜೋಶಿ ಹೇಳಿದರು.
2030ರ ವೇಳೆಗೆ ಈ ಕೊಡುಗೆಯನ್ನು ಶೇ.2.5ಕ್ಕೆ ಹೆಚ್ಚಿಸುವ ಕೇಂದ್ರದ ಗುರಿಯನ್ನು ಒತ್ತಿ ಹೇಳಿದ ಅವರು, ಗಣಿಗಾರಿಕೆ ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವಿದೆ ಎಂದು ಸೂಚಿಸಿ, ಹೂಡಿಕೆದಾರರು ಈ ಅವಕಾಶದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಲ್ಲಿದ್ದಲು ಸಚಿವಾಲಯವು ನವೆಂಬರ್ 3, 2022 ರಂದು ಆರನೇ ಕಂತಿನ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜನ್ನು ಪ್ರಾರಂಭಿಸಿತು, ಇದರಲ್ಲಿ ಐದನೇ ಕಂತಿನ ಎರಡನೇ ಪ್ರಯತ್ನದ ಅಡಿಯಲ್ಲಿ ಎಂಟು ಕಲ್ಲಿದ್ದಲು ಗಣಿಗಳು ಸೇರಿದಂತೆ 141 ಕಲ್ಲಿದ್ದಲು ಗಣಿಗಳನ್ನು ಕೊಡುಗೆಗಾಗಿ ಇಡಲಾಗಿದೆ.
2015 ರಿಂದ 2021 ರವರೆಗೆ ಆರು ವರ್ಷಗಳಲ್ಲಿ 108 ಬ್ಲಾಕ್ ಗಳನ್ನು ಹರಾಜು ಹಾಕಲಾಗಿದ್ದರೆ, ಗಣಿ ಸಚಿವಾಲಯವು ಮಾರ್ಚ್ 2021 ರಿಂದ 108 ಖನಿಜ ಬ್ಲಾಕ್ ಗಳನ್ನು ಹರಾಜು ಹಾಕಿದೆ.ಇದಲ್ಲದೆ, 70 ಖನಿಜ ನಿಕ್ಷೇಪಗಳ ಹರಾಜು ಪ್ರಕ್ರಿಯೆಯಲ್ಲಿದೆ.
ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು 200 ಕ್ಕೂ ಹೆಚ್ಚು ಅನ್ವೇಷಿತ ಬ್ಲಾಕ್ ಗಳನ್ನು ಹರಾಜಿಗಾಗಿ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಿದೆ.
ದೇಶದಲ್ಲಿ 400 ಕ್ಕೂ ಹೆಚ್ಚು ಬ್ಲಾಕ್ ಗಳು ಹರಾಜಿಗೆ ಸಿದ್ಧವಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.