ಬೆಂಗಳೂರು: ಮೂರನೇ ಬಾರಿ ನನಗೆ ಹೃದಯ ಶಸ್ತ್ರಚಿಕಿತ್ಸೆ ನಡೆದಿದ್ದು, ಮತ್ತೆ ಜನರ ಸೇವೆ ಮಾಡಲಿ ಎಂದು ಭಗವಂತ ನನ್ನನ್ನು ಕಾಪಾಡಿದ್ದಾನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಲೋಪವಾಗಿತ್ತು, ಈಗ ಮತ್ತೆ ಚಿಕಿತ್ಸೆ ಪಡೆದಿದ್ದೇನೆ ಎಂದಿದ್ದಾರೆ. ನಾಡಿನಾದ್ಯಂತ ಅಭಿಮಾನಿಗಳು, ಹಿತೈಷಿಗಳು ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ. ಅವರ ಪ್ರಾರ್ಥನೆ ಫಲ ಕೊಟ್ಟಿದೆ. ಚಿಕಿತ್ಸೆ ಬಳಿಕ, ವೈದ್ಯರು ನನ್ನ ಬಳಿ ಚರ್ಚೆ ಮಾಡಿದರು. ವೈದ್ಯರು ಸಾಯಿಬಾಬಾನ ಭಕ್ತರಾಗಿದ್ದು, ಸಾಯಿಬಾಬಾನಿಗೆ ಪೂಜೆ ಸಲ್ಲಿಸಿ ಆಪರೇಷನ್ ನೆರವೇರಿಸಿದ್ದಾರೆ. ನಾನು ಆಪರೇಷನ್ ಮಾಡಿಲ್ಲ, ಸಾಯಿಬಾಬಾನೇ ಆಪರೇಷನ್ ಮಾಡಿದ್ದು ಎಂದು ವೈದ್ಯರು ಹೇಳಿದರು. ಮತ್ತೊರ್ವ ವೈದ್ಯ ಹಂಗೇರಿಯಾದವರು, ನನಗೆ ಮರುಜನ್ಮ ನೀಡಿದ್ದಾರೆ ಎಂದರು
ಲೋಕಸಭಾ ಚುನಾವಣೆಗೆ ನನ್ನ ಕೈಲಾದ ರೀತಿ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ. ಎನ್ಡಿಎ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ನಡೆಸುತ್ತೇನೆ. ವೈದ್ಯರು ಮೂರ್ನಾಲ್ಕು ದಿನಗಳ ಕಾಲ ವಿಶ್ರಾಂತಿ ಮಾಡಲು ಹೇಳಿದ್ದಾರೆ. ಇನ್ನೆರೆಡು ದಿನಗಳಲ್ಲಿ ಮಂಡ್ಯ ಅಭ್ಯರ್ಥಿ ಯಾರೆಂಬುದು ಫೈನಲ್ ಆಗಲಿದೆ ಎಂದರು.