ಕೋಲಾರ: ಬರ ಘೋಷಣೆ ಸಂಬಂಧ ಸೋಮವಾರ ಸಚಿವ ಸಂಪುಟ ಉಪಸಮಿತಿ ಸಭೆ ನಡೆಯಲಿದ್ದು, ಬರಪೀಡಿತ ತಾಲೂಕುಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬರಘೋಷಣೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಮಾನದಂಡ ನಿಗದಿ ಮಾಡಿದೆ. ಅದರ ಅನ್ವಯವೇ ಬರಪೀಡಿತ ತಾಲೂಕುಗಳ ಘೋಷಣೆ ಮಾಡಲಾಗುವುದು ಎಂದರು.
ಆ ಮಾನದಂಡ ಪ್ರಕಾರ ರಾಜ್ಯದ 113 ತಾಲೂಕುಗಳನ್ನು ಆಗಸ್ಟ್ 18ರಂದು ತಾತ್ಕಾಲಿಕ ಬರಪೀಡಿತ ಎಂದು ಪಟ್ಟಿ ಮಾಡಿಕೊಂಡಿದ್ದೇವೆ. ಜಿಲ್ಲೆಗಳಿಂದ ಬೆಳೆ ಸಮೀಕ್ಷೆ ವರದಿ ತರಿಸಿಕೊಂಡಿದ್ದೇವೆ. ಕನಿಷ್ಠ ಮೂರು ವಾರ ಶೇ. 60ಕ್ಕಿಂತ ಹೆಚ್ಚಿನ ಮಳೆ ಕೊರತೆ ಇರಬೇಕು ಯಾವ ತಾಲೂಕು ಅರ್ಹವಾಗುತ್ತದೆ ಎಂದು ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು. ಅವಶ್ಯವಿದ್ದಲ್ಲಿ ಸಚಿವ ಸಂಪುಟದ ಗಮನಕ್ಕೂ ತಂದು ಘೋಷಣೆ ಮಾಡಲಾಗುವುದು ಎಂದರು.